Shubhashaya News

ಪುಸ್ತಕಗಳು ಉತ್ತಮ ಬದುಕು ಕಟ್ಟಿಕೊಡುವ ಶಕ್ತಿ ಹೊಂದಿವೆ: ಡಾ. ಬಸವರಾಜ ಕೊನೇಕ್

ಕಲಬುರಗಿ: ಮನುಷ್ಯನ ಆಲಸ್ಯವನ್ನು ದೂರಮಾಡಿ ಜ್ಞಾನವಂತರನ್ನಾಗಿ ಮಾಡುವುದರ ಜೊತೆಗೆ ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಪುಸ್ತಕಗಳು ಶಕ್ತಿ ನೀಡುತ್ತವೆ ಎಂದು ಪ್ರಕಾಶಕ ಡಾ. ಬಸವರಾಜ ಕೊನೇಕ್ ಹೇಳಿದರು.

ಸಾಹಿತಿ ಮಲ್ಲಮ್ಮ ಶಿವರಾಜ ಕಾಳಗಿ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದಡಿ ಆಯೋಜಿಸಿದ್ದ ಸಮಾರಂಭದಲ್ಲಿ ಮಲ್ಲಮ್ಮ ಕಾಳಗಿ ರಚಿಸಿರುವ ‘ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ರಾಷ್ಟ್ರಪತಿಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗ್ರಂಥಾಲಯವು ಶಿಕ್ಷಣ ಕ್ಷೇತ್ರದ ಹೃದಯಭಾಗವಿದ್ದಂತೆ. ಇದರ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರಂತರ ಓದಿನ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡಾಗ ಜೀವನ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಹೇಳಿದರು.

ಪುಸ್ತಕಗಳಿಗೆ ಬಡವ-ಶ್ರೀಮಂತ ಎಂಬ ಯಾವುದೇ ಭೇದಭಾವವಿಲ್ಲ. ಪುಸ್ತಕಗಳನ್ನು ಪ್ರೀತಿಸಿ, ಅದರಲ್ಲಿರುವ ವಿಚಾರಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಜಗತ್ತನ್ನು ಅರಿತ ನಾಯಕರಾಗಿ ಹೊರಹೊಮ್ಮಬಹುದು. ವ್ಯಕ್ತಿಯ ಜ್ಞಾನ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಓದಿನತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಆಧುನಿಕ ಯುಗದಲ್ಲೂ ಪುಸ್ತಕ ಓದು ಅಗತ್ಯ

ಕಾರ್ಯಕ್ರಮದ ಅತಿಥಿ ಕಲ್ಯಾಣಕುಮಾರ ಶಿಲವಂತ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ವ್ಯಕ್ತಿತ್ವ ವಿಕಸನ ಹಾಗೂ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪುಸ್ತಕಗಳ ಓದು ಅತ್ಯಂತ ಅಗತ್ಯವಾಗಿದೆ ಎಂದರು.

ಪುಸ್ತಕ ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಸಿಕೊಳ್ಳುವುದರ ಜೊತೆಗೆ ಸಮಾಜ ಗುರುತಿಸುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯವೂ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಮಾತನಾಡಿ, ‘ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ವರ್ಷದಿಂದ ಪ್ರಾಧಿಕಾರ ಹಮ್ಮಿಕೊಂಡಿರುವ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಉತ್ತಮ ಯಶಸ್ಸು ಕಂಡಿದೆ ಎಂದರು.

ಮಲ್ಲಮ್ಮ ಶಿವರಾಜ ಕಾಳಗಿ ಅವರು ತಮ್ಮ ಮನೆಯಲ್ಲಿ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿರುವುದು ಸಂತಸದ ಸಂಗತಿಯಾಗಿದೆ. ಅವರ ಓದು ಮತ್ತು ಗ್ರಂಥಾಲಯ ನಿರ್ಮಾಣದ ಆಸಕ್ತಿಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅಭಿನಂದನಾ ಪತ್ರ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ, ಡಾ. ನಾಗಪ್ಪ ಗೋಗಿ, ಪರ್ವೀನ್ ಸುಲ್ತಾನ, ಮಹೇಶ್ ಗಂವಾರ, ಉದಯಕುಮಾರ ವೀರಶೆಟ್ಟಿ, ಶಿವರಾಜ ಕಾಳಗಿ, ಶ್ವೇತಾ ವಡ್ಡನಕೇರಿ, ವಿದ್ಯಾಧರ, ಸಿದ್ದು, ಮೋಹನ ಗೌಳಿ ಹಾಗೂ ಕಲಾವತಿ ಉಪಸ್ಥಿತರಿದ್ದರು.

ಡಾ. ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ಬಸವಪ್ರಭು ಪ್ರಾರ್ಥಿಸಿದರು. ಶೋಭಾದೇವಿ ಚೆಕ್ಕಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಜ ಕಾಳಗಿ ವಂದಿಸಿದರು.

Leave A Reply

Your email address will not be published.