ಚಿತ್ತಾಪುರ: ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಜಿಪಂ ಸದಸ್ಯ ಶಿವರುದ್ರ ಭೀಣಿ ಅಡಿಗಲ್ಲು ನೆರವೇರಿಸಿದರು.
ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದಗಿನಿಂದಲೂ ತಾಲೂಕಿನ ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿಯಾಗಿವೆ ಎಂದು ದಿಗ್ಗಾಂವ ಜಿಪಂ ಸದಸ್ಯ ಶಿವರುದ್ರ ಭೀಣಿ ಹೇಳಿದರು.
ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಎಸ್.ಸಿ.ಪಿ ಯೋಜನೆ ಅಡಿ ಗ್ರಾಮದಿಂದ ತಾಂಡಾದವರೆಗೆ 50 ಲಕ್ಷ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಚಿತ್ತಾಪುರ ಮತಕ್ಷೇತ್ರದಿಂದ ಅನೇಕ ಜನರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಶಾಸಕರು ಗ್ರಾಮಕ್ಕೆ ಕೇವಲ 5-10 ಲಕ್ಷ ರೂ. ಅನುದಾನ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ಸಾಕು ಅಭಿವೃದ್ಧಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೇವೂ. ಆದರೆ ಪ್ರಿಯಾಂಕ್ ಖರ್ಗೆ ಅವರು ಲಕ್ಷ ಅಲ್ಲ ಕೋಟಿಗಟ್ಟಲೇ ಅನುದಾನ ನೀಡಿ ಅಭಿವೃದ್ಧಿ ಪಡಿಸಿದರೂ ಕೆಲವು ಗ್ರಾಮಗಳಲ್ಲಿ ಮತಗಳು ಕಡಿಮೆ ಬೀಳುತ್ತಿವೆ. ಇದು ನ್ಯಾಯಾನಾ? ಮತದಾರರಾದವರೂ ಒಮ್ಮೇ ಯೋಚಿಸಿ ನೋಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರು ಪ್ರತಿಯೊಂದು ಗ್ರಾಮಕ್ಕೆ ಕೋಟಿ ಗಟ್ಟಲೇ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಆದರೆ ಅವರು ಪ್ರಚಾರ ಮಾಡಲಿಲ್ಲ. ಕೆಲವು ಹಿಂದಿನ ಶಾಸಕರು ಇದ್ದಾರೆ ಗ್ರಾಮಕ್ಕೆ 5-10 ಲಕ್ಷ ರೂ. ಮಾತ್ರ ನೀಡಿ ನಿಮ್ಮ ಗ್ರಾಮಕ್ಕೆ ಇಷ್ಟು ಲಕ್ಷ ಅಷ್ಟು ಲಕ್ಷ ಎಂದು ಪ್ರಚಾರ ಮಾಡುತ್ತಾರೆ. ಆದರೆ ಅವರಿಗೆ ಕೋಟಿಗಟ್ಟಲೇ ಅನುದಾನ ಹೇಗೆ ತರಬೇಕು ಎನ್ನುವುದೇ ಗೋತ್ತಿರಲಿಲ್ಲ. ಆದರೆ ಪ್ರಿಯಾಂಕ್ ಖರ್ಗೆ ಅವರಿಗೆ ಸರ್ಕಾರ ಇರಲಿ ಅಥವಾ ಇರದೇ ಇರಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿಲ್ಲಬಾರದು ಎಂದು ಕೋಟಿಗಟ್ಟಲೇ ಅನುದಾನ ಬಿಡಗಡೆಗೊಳಿಸುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದನ್ನು ಕ್ಷೇತ್ರದ ಮತದಾರರು ಮರೇಯಬಾರದು ಎಂದು ಕಿವಿಮಾತು ಹೇಳಿದರು.
ಗುತ್ತಿಗೆದಾರರಿಗೆ ನೀಡಿದ ಕೆಲಸಗಳು ಕಳಪೆ ಮಟ್ಟದಲ್ಲಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತೀವೆ. ನಿಮಗೆ ಕೆಲಸಗಳನ್ನು ನೀಡಲಾಗುತ್ತದೆ ಅದರಂತೆ ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡಬೇಕು. ಅದು ಬಿಟ್ಟು ನೀವು ಕಳಪೆ ಮಟ್ಟದಲ್ಲಿ ಕೆಲಸಗಳನ್ನು ಮಾಡಿದರೇ ಕ್ಷೇತ್ರದ ಮತದಾರರು ರಾಜಕೀಯ ವ್ಯಕ್ತಿಗಳ ಮೇಲೆ ಬಟ್ಟು ಮಾಡಿ ತೋರಿಸಿ ಏನು ಅಭಿವೃದ್ಧಿ ಕೆಲಸ ಮಾಡಿಸಿದ್ದೀರಿ ಎಲ್ಲ ಕಳಪೆ ಕಾಮಗಾರಿಗಳಾಗಿವೆ ಎಂದು ದೂರುತ್ತಾರೆ. ಆದ್ದರಿಂದ ಕಳಪೆ ಮಟ್ಟದ ಕಾಮಗಾರಿ ಮಾಡದೇ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಬಂದಿರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಸೀತಾಬಾಯಿ ಪವಾರ್, ಸದಸ್ಯರಾದ ಅಯ್ಯಪ್ಪ ಪವಾರ್, ಪ್ರೇಮಕುಮಾರ, ದೇವಿಂದ್ರಪ್ಪ ಜೈನ್, ಪಿಡಿಒ ಮಲ್ಲಣ್ಣಗೌಡ, ಮುಖಂಡರಾದ ಖಾಸೀಂಸಾಬ್ ಮುಲ್ಲಾ, ಗೋಪಾಲ್ ಚವ್ಹಾಣ, ಭೀಮರಾಯ ದ್ಯಾವಕರ್, ರಾಜು ನಾಯಕ್, ಜಗದೀಶ ರಾಠೋಡ, ಬಸಪ್ಪ ಬಡಿಗೇರ್, ಕೋಟ್ರಯ್ಯಸ್ವಾಮಿ ಸೇರಿದಂತೆ ಇತರರು ಇದ್ದರು.
Comments are closed.