Shubhashaya News

ದಲಿತ ಸಮಾಜಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿಯಲ್ಲಿ ‘ಹೊಲೆಯ’ ಎಂದು ನೋಂದಾಯಿಸಿ: ಬೋಳನಿ ಮನವಿ 

ಆಳಂದ: ಸುಪ್ರೀಂ ಕೋರ್ಟ್‍ನ ಆದೇಶದಂತೆ ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ, ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್ ರವರ ಏಕ ಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಜಾತಿ ಗಣತಿ ಸಮೀಕ್ಷೆಯನ್ನು ಏ.5ರಿಂದ ಆರಂಭಿಸಿದ್ದು, ಏ15 ಕೊನೆಯ ದಿನಾಂಕವಾಗಿದೆ. ಈ ಸಂದರ್ಭದಲ್ಲಿ, ದಲಿತ ಸೇನೆಯ ಆರ್. ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಬೋಳನಿ ಅವರು ದಲಿತ ಸಮಾಜದ ಮುಖಂಡರಿಗೆ ಮತ್ತು ಗ್ರಾಮೀಣ ಪ್ರಮುಖರಿಗೆ ವಿಶೇಷ ಮನವಿ ಮಾಡಿದ್ದಾರೆ.

ದಲಿತ ಸಮುದಾಯದ ಯುವ ಜನರಿಗೆ ಶಿಕ್ಷಣ, ಉದ್ಯೋಗ, ಮತ್ತು ಸಾಮಾಜಿಕ ನ್ಯಾಯದಲ್ಲಿ ಸಮಾನ ಅವಕಾಶ ಒದಗಿಸಲು ಈ ಜಾತಿ ಗಣತಿ ನಿರ್ಣಾಯಕವಾಗಿದೆ. ಒಳಮೀಸಲಾತಿಯಿಂದ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸದೃಢತೆ ಸಾಧ್ಯವಾಗಲಿದೆ. ಆದರೆ, ಜಾತಿ ಗಣತಿಯಲ್ಲಿ ನಿಖರವಾದ ದತ್ತಾಂಶ ಸಂಗ್ರಹವಾಗದಿದ್ದರೆ, ಭವಿಷ್ಯದಲ್ಲಿ ಯುವ ಜನರಿಗೆ ಸಾಮಾಜಿಕ ಅನ್ಯಾಯ ಮತ್ತು ನಿರುದ್ಯೋಗ ಸಮಸ್ಯೆಗಳು ಎದುರಾಗಬಹುದು ಎಂದು ಮಲ್ಲಿಕಾರ್ಜುನ್ ಬೋಳನಿ  ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರತಿ ಗ್ರಾಮದ ಪ್ರಮುಖರು ಮನೆ-ಮನೆಗೆ ತೆರಳಿ, ಸಮೀಕ್ಷಾದಾರರಿಗೆ ‘ಹೊಲೆಯ’ ಜಾತಿ ಎಂದು ಸ್ಪಷ್ಟವಾಗಿ ತಿಳಿಸಿ ನೋಂದಾಯಿಸಬೇಕೆಂದು ಅವರು ಕೋರಿದ್ದಾರೆ. ಇದಕ್ಕಾಗಿ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ಆರ್‍ಡಿ ಸಂಖ್ಯೆ, ಮತ್ತು ರೇಷನ್ ಕಾರ್ಡ್ ಸಂಖ್ಯೆಯನ್ನು ಸಿದ್ಧವಾಗಿರಿಸಿಕೊಂಡು, ಸಮೀಕ್ಷೆಯಲ್ಲಿ ಭಾಗವಹಿಸಲು ಸಮಾಜದವರಿಗೆ ಮನವಿ ಮಾಡಿದ್ದಾರೆ.

ಮಲ್ಲಿಕಾರ್ಜುನ್ ಬೋಳನಿ ಅವರು, “ಈ ಜಾತಿ ಗಣತಿಯು ದಲಿತ ಸಮಾಜದ ಯುವ ಪೀಳಿಗೆಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಬಲೀಕರಣದ ದ್ವಾರವಾಗಿದೆ. ಆದ್ದರಿಂದ, ಗ್ರಾಮೀಣ ಮುಖಂಡರು ಮತ್ತು ಸಮಾಜದವರು ಒಗ್ಗಟ್ಟಿನಿಂದ ‘ಹೊಲೆಯ’ ಎಂದು ನೋಂದಾಯಿಸಿ, ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯ ಒಡಮೂಡಿಸಲು ಕೈಜೋಡಿಸಬೇಕು,” ಎಂದು ಒತ್ತಿ ಹೇಳಿದ್ದಾರೆ.

Comments are closed.

Don`t copy text!