ಆಳಂದ: ಪಟ್ಟಣದ ಅಮತಾಅ ಸರ್ಕಾರಿ ಪದವಿ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಡಾ. ಅಂಬಾದಾಸ ಕಾಂಬಳೆ ಸಸಿನೆಟ್ಟು ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಪ್ರೇಮಿಳಾ ಅಂಬರಾಯ, ಡಾ. ರವಿಂದ್ರ ಕಂಟೆಕೂರೆ ಇತರರು ಇದ್ದರು.
ಆಳಂದ: ಪಟ್ಟಣದ ಅಫ್ಜಲ್ ಮಶಾಕ್ಜೀ ತಾಹೇರ್ ಅನ್ಸಾರಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಗುಲಬರಗಾ ವಿಶ್ವ ವಿದ್ಯಾಲಯ ಆಶ್ರಯದಲ್ಲಿ ಶನಿವಾರ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ (ಎನ್ಎಸ್ಎಸ್) ವಾರ್ಷಿಕ ವಿಶೇಷ ಶಿಬಿರವನ್ನು ಸಸಿನೆಟ್ಟು ನೀರುಣಿಸಿ ಉದ್ಘಾಟಿಸಲಾಯಿತು.
ಶಿಬಿರವನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಡಾ. ಅಂಬಾದಾಸ್ ಕಾಂಬಳೆ ಅವರು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಬಡತನ, ಸಂಕಷ್ಟಗಳು ಮತ್ತು ಶೈಕ್ಷಣಿಕ ಸಾಧನೆಯ ಪಯಣವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಡಾ. ಕಾಂಬಳೆ ಅವರು ಏಳನೇ ತರಗತಿಯಲ್ಲಿ ಶಾಲೆಯಿಂದ ಹೊರಬಿದ್ದು, ಮುಂಬೈಗೆ ತೆರಳಿದ್ದ ಅನುಭವವನ್ನು ವಿವರಿಸಿದರು. ಆದರೆ, ಕಲಿಕೆಯ ಆಸಕ್ತಿಯಿಂದ ಮತ್ತೆ ಎಂಟನೇ ತರಗತಿಗೆ ಸೇರಿ, ಹತ್ತನೇ ತರಗತಿ, ಡಿಗ್ರಿ ಹಾಗೂ ಪಿಎಚ್ಡಿ ವರೆಗೆ ಓದಿ ಯಶಸ್ಸು ಸಾಧಿಸಿದ್ದನ್ನು ತಿಳಿಸಿದರು. “ಸಂಕಷ್ಟದ ದಿನಗಳಲ್ಲೂ ಕಲಿಕೆ ಮತ್ತು ಗುರಿ ಸಾಧನೆಯನ್ನು ಮುಂದುವರಿಸಬೇಕು. ವಿವಾಹವು ಕಲಿಕೆಗೆ ಅಡ್ಡಿಯಲ್ಲ. ನಾನು ಮದುವೆಯಾಗಿ, ನಾಲ್ಕು ಮಕ್ಕಳ ತಂದೆಯಾದ ಬಳಿಕವೂ ಕೆಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾದೆ,” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪ್ರೇಮೀಳಾ ಅಂಬಾರಾಯ ಅವರು ಮಾತನಾಡಿ, “ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳಿಗೆ ಸಾಮಾಜಿಕ ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಅವಕಾಶವಾಗಿದೆ. ಕಾಲೇಜಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಗುರಿಗಳನ್ನು ಸಾಧಿಸಬೇಕು,” ಎಂದರು. ಕಾಲೇಜಿನಲ್ಲಿ ತಂತ್ರಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಮತ್ತು ಉಚಿತ ಕಂಪ್ಯೂಟರ್ ಶಿಕ್ಷಣದ ಯೋಜನೆಗಳನ್ನು ವಿವರಿಸಿದರು.
ಹಿರಿಯ ಪತ್ರಕರ್ತರಾದ ಮಹದೇವ ವಡಗಾಂವ, ಶಿವಲಿಂಗ್ ತೇಲ್ಕರ್ ಅವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಯ ಮಹತ್ವವನ್ನು ತಿಳಿಸಿದರು. ಎನ್ಎಸ್ಎಸ್ ಯೋಜನಾಧಿಕಾರಿ ಡಾ. ರವಿಚಂದ್ರನ್ ಕಂಟೇಕೊರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಶಿಬಿರವು ಮೇ 3 ರಿಂದ 9, 2025 ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆ, ವೈಯಕ್ತಿಕ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಈ ಶಿಬಿರವು ವೇದಿಕೆಯಾಗಲಿದೆ.
ರವಿ ಗೌಡಗೇರಿ, ಮಹಾದೇವ ಮೋಘಾ, ಡಾ. ನಫಿಸಾ ಫಾತಿಮಾ, ಸಿದ್ಧರಾಮ ವಾಕಡೆ, ದೋಂಡಿಬಾ ನಿಕ್ಕಂ, ಡಾ. ಶೋಭಾ ಕಣ್ಣಿ, ಜೋತಿ ಜಾಧವ, ಸೇವಾ ಯೋಜನೆ ಅಧಿಕಾರಿ ಮಲ್ಲಿಕಾರ್ಜುನ, ಡಾ. ಅರವಿಂದ ಅಂಗಡಿ, ಅರುಣಿತಾ ಆಲ್ಮೆಲಕರ್ ಸೇರಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪ್ರಾಧ್ಯಾಪಕ ರಾಜಶೇಖರ ಪಾಟೀಲ ನಿರೂಪಿಸಿದರು. ಯೋಜನಾಧಿಕಾರಿ ಡಾ. ರವಿಚಂದ್ರ ಕಂಟೆಕೂರೆ ಸ್ವಾಗತಿಸಿದರು. ರವಿಂದ್ರಗೌಡಗೇರಿ ವಂದಿಸಿದರು.
Comments are closed.