ಸಿಯುಕೆಯಿಂದ ಮೂರು ದಿನಗಳ ವಿಸ್ತರಣಾ ಕಾರ್ಯಕ್ರಮ
ಕಡಗಂಚಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ವಿಜ್ಞಾನ ಕಲಿಕೆಯ ‘ಪ್ರವರ್ತನ’ ಪಾಠ
ಆಳಂದ: ಕಡಗಂಚಿ ವಿದ್ಯಾರ್ಥಿಗಳಿಗಾಗಿ ಸಿಯುಕೆ ಆಯೋಜಿಸಿದ್ದ ‘ಪ್ರವರ್ತನ’ ವಿಸ್ತರಣಾ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿದರು.
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಐಇಇಇ-ಎಐಜಿಎಟಿ ಅಫಿನಿಟಿ ಗ್ರೂಪ್, ಉನ್ನತ ಭಾರತ ಅಭಿಯಾನ (ಯುಬಿಎ) ಘಟಕದ ಸಹಯೋಗ ಹಾಗೂ ಐಇಇಇ ಬೆಂಗಳೂರು ವಿಭಾಗದ ಆಶ್ರಯದಲ್ಲಿ ತಾಲೂಕಿನ ಕಡಗಂಚಿಯ ವಿದ್ಯಾವರ್ಧಕ ಸಂಘದ ಸಂಯುಕ್ತ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಮೂರು ದಿನಗಳ ‘ಪ್ರವರ್ತನ’ ವಿಸ್ತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು ಹಾಗೂ ಕಠಿಣ ಪರಿಶ್ರಮದ ಮೂಲಕ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು. ಭಾಷೆ ಅಥವಾ ಶಿಕ್ಷಣದ ಮಾಧ್ಯಮವು ಸಾಧನೆಗೆ ಅಡ್ಡಿಯಾಗಬಾರದು. ಪ್ರಧಾನಮಂತ್ರಿ, ರಾಷ್ಟçಪತಿ ಹಾಗೂ ಮಾಜಿ ರಾಷ್ಟçಪತಿ, ಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಸಾಧನೆಗಳನ್ನು ಉದಾಹರಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ದೃಢನಿಶ್ಚಯ ಮತ್ತು ಆಕಾಂಕ್ಷೆಗಳನ್ನು ನಂಬಿ ಮುನ್ನಡೆಯಬೇಕು ಎಂದರು.
ಸಿಯುಕೆಯಲ್ಲಿ ಲಭ್ಯವಿರುವ ಉನ್ನತ ಶಿಕ್ಷಣದ ವಿವಿಧ ಅವಕಾಶಗಳನ್ನು ಅರಿತು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿ.ವಿ.ಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ಸ್ವಯಂಸೇವಕರ ನೇತೃತ್ವದಲ್ಲಿ ನಡೆದ ತರಬೇತಿಯಲ್ಲಿ ೧೦ನೇ ತರಗತಿಯ ೬೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂವಾದಾತ್ಮಕ ತರಗತಿಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಂಡದ ಮನೋಭಾವ, ವೈಜ್ಞಾನಿಕ ಕುತೂಹಲ ಮತ್ತು ತಾಂತ್ರಿಕ ಜ್ಞಾನ ಬೆಳೆಸುವ ಪ್ರಯತ್ನ ನಡೆಯಿತು.
ಅರಡು ಇನೋ, ಯುಎನ್ಒ, ಐಒಟಿ, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಿಸ್ಟಂ ಆಧಾರಿತ ಕಲಿಕೆ ಸೇರಿದಂತೆ ವಿವಿಧ ತಾಂತ್ರಿಕ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.
ಶಾಲೆಯ ಪ್ರಾಂಶುಪಾಲ ಲಿಂಗರಾಜ್ ಎಸ್. ಪಾಟೀಲ್ ಅವರು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದರು. ಐಇಇಇ, ಎಸ್ಐಎಚ್ಟಿಯ ಪ್ರಾಧ್ಯಾಪಕ ಸಲಹೆಗಾರ ಡಾ. ನೃಸಿಂಹ ಚರಣ್ ಪ್ರಧಾನ್ ಹಾಗೂ ಯುಬಿಎ ಘಟಕದ ಡಾ. ಹರೀಶ್ ಚೌಧರಿ ಅವರು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕುತೂಹಲ, ಸೃಜನಶೀಲತೆ ಮತ್ತು ತಾಂತ್ರಿಕ ಜ್ಞಾನ ಬೆಳೆಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.