Shubhashaya News

ಆ.18 ರಂದು ರಸ್ತೆ ತಡೆದು ಪ್ರತಿಭಟನೆ

ಚಿತ್ತಾಪುರ; ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಮಲೀಲಾ ಮೈದಾನದಲ್ಲಿ ಮಾಡಿದ ಅವಮಾನವನ್ನು ಖಂಡಿಸಿ ಪಟ್ಟಣದ ಲಾಡ್ಜೀಂಗ್ ಕ್ರಾಸ್ ಹತ್ತಿರ ಆ.18 ರಂದು ಬೆಳಗ್ಗೆ 11 ಗಂಟೆಗೆ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಮುಕ್ತಾರ್ ಪಟೇಲ್ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆರವರು ದಲಿತರು ಎನ್ನುವ ಕಾರಣಕ್ಕೆ ಅವರು ರಾಮಲೀಲಾ ಮೈದಾನದಲ್ಲಿ ಭಾಗವಹಿಸಿದ ಸ್ಥಳವನ್ನು ಆರ್‌ಎಸ್‌ಎಸ್‌, ವಿಎಚ್‌ಪಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿಕೊಂಡು ಗಂಗಾಜಲದ ಮೂಲಕ ಶುದ್ದೀಕರಣ ಮಾಡಿರುವುದು ಸ್ವಾತಂತ್ರ ಭಾರತದ ನಾಗರಿಕ ಸಮಾಜದಲ್ಲಿ ಮಾಡಿದ ದೊಡ್ಡ ಅವಮಾನವಾಗಿದೆ ಇದನ್ನು ಬಲವಾಗಿ ಖಂಡಿಸಲಾಗುವುದು ಎಂದು ಹೇಳಿದರು.
ನಮಗೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ಇನ್ನೂ ಕೆಲ ಪಟ್ಟಭದ್ರ ಹಿತಾಸಕ್ತಿಯವರು ಮನುಸ್ಮೃತಿ ಸಂಸ್ಕೃತಿಯಿಂದ ಹೊರಬರದಿರುವುದು ತುಂಬಾ ನಾಚಿಕೆಗೇಡಿನ ಸಂಗಾತಿಯಾಗಿದೆ. ಘಟನೆ ನಡೆದು ಇಷ್ಟು ದಿನಗಳು ಕಳೆದರೂ ಇಂತಹ ಕೃತ್ಯ ಎಸಗಿದವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಮ್ಮನಿರುವುದು ನೋಡಿದರೆ ಇದೆಲ್ಲದಕ್ಕೆ ಅವರ ಕುಮ್ಮಕ್ಕೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ದೇಶದ ಹಿರಿಯ ಹಾಗೂ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿಯಾಗಿರುವ ಮಲ್ಲಿಕಾರ್ಜುನ ಖರ್ಗೆರವರಿಗೆ ರಾಮಲೀಲಾ ಮೈದಾನದಲ್ಲಿ ಮಾಡಿರುವ ಅವಮಾನವು ದೇಶದ ಜನತೆ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಇದನ್ನು ಖಂಡಿಸಿ ಸಮಾನ ಮನಸ್ಕರು ಕೂಡಿಕೊಂಡು ರಸ್ತೆ ತಡೆ ಪ್ರತಿಭಟನೆಯನ್ನು ಮಾಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಯುವ ಅಧ್ಯಕ್ಷ ದೇವಿಂದ್ರ ಯಾಬಾಳ, ಮುಖಂಡರಾದ ನಾಗರೆಡ್ಡಿ ಗೋಪಸೇನ್, ರಸೂಲ್ ಮುಸ್ತಪಾ, ಈರಪ್ಪ ಭೋವಿ, ಸಂಜಯ ಬುಳಕರ್, ಮಲ್ಲಿಕಾರ್ಜುನ ಮುಡಬೂಳಕರ್, ದೇವಿಂದ್ರ ಕುಮಸಿ, ನಾಗಯ್ಯ ಗುತ್ತೇದಾರ, ಭೀಮಸಿಂಗ ಚವ್ಹಾಣ, ನಜೀರ್‌ ಆಡಕಿ, ಸೈಯದ್ ಸೇಠ್, ಭಗವಂತ ಕಟಕೆ, ಸುಭಾಷ್ ಕಲ್ಮರಿ ಸೇರಿದಂತೆ ಇತರರು ಇದ್ದರು.

Leave A Reply

Your email address will not be published.