Shubhashaya News

ಬೆಳೆ ವಿಮೆ ಬಿಡುಗಡೆ, ಬರ ಘೋಷಣೆಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ಆಳಂದ: ಖಜೂರಿ ಗ್ರಾಮದ ಕ್ರಾಸ್‌ನ ರಾಜ್ಯ ಹೆದ್ದಾರಿ ತಡೆದು ಬೆಳೆ ವಿಮೆ ಬಿಡುಗಡೆ ಸೇರಿ ಇತರ ಬೇಡಿಕೆಗೆ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಆಳಂದ: ಬೆಳೆ ವಿಮೆಯ ಎರಡನೇ ಕಂತಿನ ಹಣ ತಕ್ಷಣ ಬಿಡುಗಡೆ ಹಾಗೂ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ತಾಲೂಕಿನ ಗಡಿಭಾಗದ ಖಜೂರಿ ಗ್ರಾಮದ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ರಸ್ತೆ ಸಂಚಾರ ತಡೆದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಾಡ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವAತೆ ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ವಿಯಕುಮಾರ ಢಗೆ, ಶ್ರೀಶೈಲ ಭೀಂಪೂರೆ, ತಿಪ್ಪಣ್ಣಾ ಬಂಡೆ, ಶ್ರೀಕಾಂತ ಖೂನೆ, ಪ್ರತಾಪ ವಾಡೆ, ನಾಗೇಂದ್ರ ಗುಗರೆ, ಮಲ್ಲಿನಾಥ ವಾನೆಗಾಂವ, ಶರಣಪ್ಪ ಹೊಸಮನಿ, ಗಾಂಧಿ ಘಂಟೆ, ಸಂಜುಕುಮಾರ ಚಂಗಳೆ, ತಾಪಂ ಮಾಜಿ ಸದಸ್ಯ ಶಿವಪ್ಪ ವಾರಿಕ, ರಾಜಕುಮಾರ ಶಿವಮೂರ್ತಿ ಮಾತನಾಡಿ, ಎರಡನೇ ಕಂತಿನ ವಿಮೆ ಹಣಕ್ಕೆ ಆಗ್ರಹ: ೨೦೨೫-೨೬ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಖಜೂರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೩,೦೦೦ ಎಕರೆ ಪ್ರದೇಶದ ೧,೬೦೦ಕ್ಕೂ ಅಧಿಕ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ. ಮಧ್ಯಂತರ ಪರಿಹಾರದ ಮೊದಲ ಕಂತಿನ ಹಣ ರೈತರ ಖಾತೆಗಳಿಗೆ ಜಮೆಯಾಗಿದ್ದರೂ, ಎರಡನೇ ಕಂತಿನ ವಿಮೆ ಹಣ ಇದುವರೆಗೆ ಯಾವುದೇ ರೈತರಿಗೂ ಬಂದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಈ ಕುರಿತು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ನೀಡದೆ, ವಿಮೆ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಖಜೂರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಖಾತೆಗಳಿಗೆ ಇದುವರೆಗೆ ಹಣ ಜಮೆಯಾಗಿಲ್ಲ. ಬೆಳೆ ಕಟಾವು ಸಮೀಕ್ಷೆಯ ಅರ್ಹತೆ ಇಲ್ಲ ಎಂಬ ಕಾರಣ ನೀಡಲಾಗುತ್ತಿದ್ದು, ಈ ಕ್ರಮದ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.
ವಿಮೆ ಹಣ ಬಿಡುಗಡೆಯಾಗದ ಗ್ರಾಮ ಪಂಚಾಯಿತಿಗಳಲ್ಲಿ ಮರುಸಮೀಕ್ಷೆ ನಡೆಸಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಇದುವರೆಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಕೂಡಲೇ ಸ್ಥಳಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ ವಾಸ್ತವಾಂಶ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಪ್ರಸಕ್ತ ಮುಂಗಾರಿನಲ್ಲಿ ಸಮರ್ಪಕ ಮಳೆಯಾಗದೆ ರೈತರು ಹಾಗೂ ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಆತಂಕವಿದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಬರ ಘೋಷಣೆ ಮಾಡಬೇಕು. ಬೆಳೆ ವಿಮೆಯ ಎರಡನೇ ಕಂತಿನ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಸಾಲಿನ ಬರ ಹಿನ್ನೆಲೆ ಪ್ರತಿ ಎಕರೆಗೆ ೫೦ ಸಾವಿರ ಪರಿಹಾರ ಘೋಷಿಸಬೇಕು. ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.ಮಹಾರಾಷ್ಟç ಮಾದರಿಯಲ್ಲಿ ರೈತರ ಸಾಲಮನ್ನಾ ಮಾಡಬೇಕು.ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಆರಂಭಿಸಬೇಕು. ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಆರಂಭಿಸಬೇಕು. ಎಂದು ನಾಡ ತಾಸಿಲ್ದಾರರಿಗೆ ಸೇವೆ ಸಲ್ಲಿಸಿ “ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ತಾಲೂಕು ಮಟ್ಟದಲ್ಲಿ ರೈತರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಚಿತಾನಂದ ಧೋಳೆ, ರೇವಣಸಿದ್ಧಪ್ಪ ಚಂಗಳೆ, ಬಸವರಾಜ ಅಲ್ದಿ, ಕುಮಾರ ಬಂಡೆ, ಗುರುಬಸಪ್ಪ ಢಗೆ, ಅರವಿಂದ ಅಲ್ದೆ, ನಾಗೇಶ ನಗರೆ, ಸಂಗನಬಸಪ್ಪ ವಾನೆಗಾಂವ, ಕರಬಸಪ್ಪ ವಾಡೆ, ಸಿದ್ಧರಾಮ ಘಂಟೆ, ಗಾಂಧಿ ಹಳ್ಳೆ, ಮಹಾದೇವ ವಾಡೆ, ಶಿವಪ್ಪ ಘಂಟೆ ಅನೇಕರು ಭಾಗವಹಿಸಿದ್ದರು.

Leave A Reply

Your email address will not be published.