Shubhashaya News

ಮೇ.1 ರಿಂದ ಕೊರೊನಾ ಲಸಿಕೆ ಅಭಿಯಾನ

ಚಿತ್ತಾಪುರ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪುರಸಭೆ ಸದಸ್ಯರು ಮೊದಲನೇಯ ಕೊರೊನಾ ಲಸಿಕೆ ಹಾಕಿಸಿಕೊಂಡರು.

ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ಕೊರೊನಾ ಲಸಿಕೆ ಹಾಕುವ ಅಭಿಯಾನ ಮಾಡಲು ನಿರ್ಧರಿಸಲಾಗಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಕೊರೊನಾ ಲಸಿಕೆ ಅಭಿಯಾನ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ 23 ವಾರ್ಡ್‍ಗಳಲ್ಲಿ ಲಸಿಕೆ ನೀಡಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಮೇ 1 ರಿಂದ ಮೇ.23ರ ವರೆಗೆ ಆಯಾ ವಾರ್ಡ್‍ಗಳ ಸ್ಥಳಗಳಲ್ಲಿ ಸದಸ್ಯರು ಜನರನ್ನು ಕರೆತಂದು ಲಸಿಕೆ ಹಾಕಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪಟ್ಟಣದ ಕಿರಾಣಿ, ಹಣ್ಣು, ತರಕಾರಿ, ಮಾಂಸ, ಮೇಡಿಕಲ್ ಸೇರಿದಂತೆ ಎಲ್ಲ ರೀತಿಯ ವ್ಯಾಪಾರಿಗಳು ಮತ್ತು ಕೆಲಸಗಾರರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಎರಡನೇ ಅಲೆ ದಿನದಿಂದ ದಿನ ಹೆಚ್ಚಾಗುತ್ತಿರುವ ಕಾರಣ ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಎಲ್ಲರೂ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಅವರ ಮಾರ್ಗದರ್ಶನದಲ್ಲಿ ಲಸಿಕೆ ಅಭಿಯಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಭಿಯಾನ ಯಶಸ್ವಿಗೆ ಪುರಸಭೆಯಿಂದ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಪಾಟೀಲ್ ಮಾತನಾಡಿ, ಬಾಣಂತಿಯರು, ಗರ್ಭೀಣಿಯರು ಮತ್ತು 18 ವರ್ಷದೊಳಗಿನವರನ್ನು ಹೊರತು ಪಡಿಸಿ ಎಲ್ಲರೂ ಕೊವೀಡ್ ಲಸಿಕೆ ತೆಗೆದುಕೊಳ್ಳಬಹುದು. ಇಲ್ಲಿಯವರೆಗೆ ತಾಲೂಕಿನಲ್ಲಿ 30 ಸಾವಿರ ಲಸಿಕೆ ನೀಡಲಾಗಿದೆ. ಆದರೆ ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಹೀಗಾಗಿ ಎಲ್ಲರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ನಕರಾತ್ಮಕ ಚಿಂತನೆ ಮಾಡದೇ ಸಕರಾತ್ಮಕವಾಗಿ ಲಾಭ ಪಡೆದುಕೊಳ್ಳಬೇಕು ಎಂದರು.
ಇದೇ ವೆಳೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸರ್ಕಾರಿ ಆಸ್ಪತ್ರೆಗೆ ತೆರಳಿ ಕೊರೊನಾ ಲಸಿಕೆ ಹಾಕಿಸಿಕೊಂಡರು.
ಪಿಎಸ್‍ಐ ಮಂಜುನಾಥರೆಡ್ಡಿ, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ಶೀಲಾ ಕಾಶಿ, ಪಾಶಾಮಿಯ್ಯಾ ಖುರೇಶಿ, ಮಹ್ಮದ್ ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಕಾಳಗಿ, ಶ್ರೀನಿವಾಸರೆಡ್ಡಿ ಪಾಲಪ್, ಶಿವರಾಜ ಪಾಳೇದ್, ಪ್ರಭು ಗಂಗಾಣಿ, ರಮೇಶ ಬಮ್ಮನಳ್ಳಿ, ಶಾಮ್ ಮೇಧಾ ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಸಂತೋಷ ಪೂಜಾರಿ, ನಜೀರ ಆಡಕಿ ಇದ್ದರು.

Comments are closed.

Don`t copy text!