Shubhashaya News

ಕೊರೊನಾ ನಿಯಂತ್ರಣಕ್ಕೆ ಲಸಿಕೆ ರಾಮಬಾಣ, ಎಲ್ಲರೂ ಲಸಿಕೆ ಪಡೆಯಿರಿ: ಪ್ರಿಯಾಂಕ್

ಚಿತ್ತಾಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಕೊರೊನಾ ನಿಯಂತ್ರಣ ಕುರಿತು ವಿಶೇಷ ಸಭೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು.

ಚಿತ್ತಾಪುರ: ಕೊರೊನಾ ನಿಯಂತ್ರಣಕ್ಕೆ ಕೊರೊನಾ ಲಸಿಕೆ ರಾಮಬಾಣವಾಗಿದ್ದು, 18 ವರ್ಷದ ಯುವಕರಿಂದ ವೃದ್ಧರೂ ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಕೊರೊನಾ ನಿಯಂತ್ರಣ ಕುರಿತು ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಸೋಂಕು ಎಲ್ಲ ಕಡೆ ಹರಡಿ ಜನರನ್ನು ಸಂಕಷ್ಟಕೀಡುಮಾಡಿದೆ. ಮುಂಜಾಗ್ರತೆ ವಹಿಸಿ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಪಡಿಕೊಂಡು, ಕೊರೊನಾ ಲಸಿಕಿ ಹಾಕಿಸಿಕೊಳ್ಳುವ ಮೂಲಕ ಕೊರೊನಾ ವೈರಸ್ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಪ್ರತಿಯೊಂದು ವಾರ್ಡ್‍ನಲ್ಲಿ ತಂಡಗಳು ರಚಿಸಿಕೊಂಡು ಆಯಾ ವಾರ್ಡ್‍ಗಳಲ್ಲಿ ಕೇಂದ್ರ ಸ್ಥಾಪಿಸಿಕೊಂಡು 18 ವರ್ಷದಿಂದ ಮೇಲ್ಪಟ್ಟವರು ಹಾಗೂ ವೃದ್ಧರೆಲ್ಲರಿಗೂ ಕೊರೊನಾ ಲಸಿಕಿ ಹಾಕಿಸುವ ಕೆಲಸ ಆಯಾ ವಾರ್ಡ್‍ಗಳ ಜನಪ್ರತಿನಿಧಿಗಳು ನೇತೃತ್ವದಲ್ಲಿ ಪಕ್ಷ ಭೇಧ ಮರೆತು ಮಾಡಬೇಕು. ಪುರಸಭೆ ಮುಖ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ ಸೇರಿಕೊಂಡು ತಂಡ ರಚಿಸಿ, ದಿನಾಂಕ ನಿಗದಿಗೊಳಿಸಿ ಕೂಡಲೇ ಲಸಿಕೆ ನೀಡುವ ಕೆಲಸ ಆರಂಭಿಸಬೇಕು. ಪಟ್ಟಣದ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೂ ಲಸಿಕಿ ಹಾಕಬೇಕು. ಬೇಡಿಕೆ ಆದ್ಯತೆ ಮೇರೆಗೆ ಲಸಿಕೆಗಳು ತರಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.
ಬೆಂಗಳೂರು, ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಆಕ್ಸಿಜನ್, ಔಷಧಗಳ ಕೊರತೆಯಿದೆ. ಸರ್ಕಾರ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ ಎಂದು ದೂರಿದರು.
ನೆರೆಯ ರಾಜ್ಯಗಳಿಗೆ ಹಾಗೂ ಬೆಂಗಳೂರಿಗೆ ಹೋದವರು ಮರಳಿ ಅನೇಕ ಜನರು ವಾಪಸ್ಸು ಬಂದು ತಮ್ಮ ತಮ್ಮ ಹಳ್ಳಿ, ತಾಂಡಾಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹವರ ಮೇಲೆ ನಿಗಾವಹಿಸಬೇಕು. ಕೊರೊನಾ ಸೋಂಕಿತರನ್ನು ಸ್ವಚ್ಛತೆಯ ಸ್ಥಳಗಳಲ್ಲಿ ಇರಿಸಬೇಕು. ಹೆಬ್ಬಾಳ ಸೇರಿದಂತೆ ಕೆಲಕಡೆ ಸೋಂಕಿತರು ಹೋಮ್ ಐಸೋಲೇಶನ ನೇಪ ಹೇಳಿ ಹೊರಗಡೆ ಓಡಾಡುತ್ತಿದ್ದಾರೆ. ಅಂತಹವರ ಮೇಲೆ ನಿಗಾವಹಿಸಿ ಆಸ್ಪತ್ರೆ ಇಲ್ಲವೇ ಕೊರೊನಾ ಕೇಂದ್ರಗಳಲ್ಲಿ ಇರಿಸಬೇಕು. ಚಿತ್ತಾಪುರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಟಾಕ್ ಇದೆ. ನಾಗಾವಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಸೋಂಕಿತರಿಗಾಗಿ 100 ಬೆಡ್ ಸ್ಥಾಪಿಸಲಾಗಿದೆ. ಜತೆಗೆ ಗುಂಡಗುರ್ತಿ ವಸತಿ ಶಾಲೆಯಲ್ಲಿಯೂ ಬೆಡ್‍ಗಳ ವ್ಯವಸ್ಥೆ ಮಾಡಲಾಗುವುದು. ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಜತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಎನ್‍ಈಕೆಆರ್‍ಟಿಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಉಪಾಧ್ಯಕ್ಷೆ ಶೃತಿ ಪೂಜಾರಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ತಹಶೀಲ್ದಾರ್ ಉಮಾಕಾಂತ ಹಳ್ಳೆ, ಪ್ರೋಬೆಶನರಿ ತಹಶೀಲ್ದಾರ್ ಕೆ.ಶೃತಿ, ಇಒ ನೀಲಗಂಗಾ ಬಬಲಾದ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ತಾಲೂಕು ವೈದ್ಯಾಧಿಕಾರಿ ಡಾ. ದಿಲೀಪ್ ಪಾಟೀಲ್, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್‍ಐ ಮಂಜುನಾಥರೆಡ್ಡಿ, ಸದಸ್ಯರಾದ ಶೀಲಾ ಕಾಶಿ, ವಿನೋದ ಗುತ್ತೇದಾರ, ಮಲ್ಲಿಕಾರ್ಜುನ ಕಾಳಗಿ, ಸಂತೋಷ ಪೂಜಾರಿ, ಭೀಮು ಹೋತಿನಮಡಿ, ಗೋವಿಂದ ರಾಠೋಡ, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಮುಕ್ತಾರ ಪಟೇಲ್, ಅಣ್ಣಾರಾವ ಸಣ್ಣೂರಕರ್, ನಜೀರ ಆಡಕಿ, ಜಗದೀಶ ಚವ್ಹಾಣ, ನಾಗಯ್ಯ ಗುತ್ತೇದಾರ, ಬಸವರಾಜ ಪೂಜಾರಿ ಇದ್ದರು.

Comments are closed.

Don`t copy text!