Shubhashaya News

ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ರದ್ದತಿಗೆ ಒತ್ತಾಯ

ಆಳಂದ ತಾಲೂಕಾ ಶಿಕ್ಷಕರು ದೆಹಲಿಯಲ್ಲಿ ಧರಣಿ  

ಆಳಂದ: ಕೇಂದ್ರ ಸರ್ಕಾರದಿಂದ ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯಗೊಳಿಸಿರುವ ನಿಯಮವನ್ನು ತಕ್ಷಣ ರದ್ದುಗೊಳಿಸಬೇಕೆಂದು ಆಗ್ರಹಿಸಿ, ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ನಾಯಕರು ಮತ್ತು ಸದಸ್ಯರು ದೆಹಲಿಯ ಜಂತರ್-ಮಂತರ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೋರಾಟದಲ್ಲಿ ಭಾಗವಹಿಸಿದರು.

ಸಂಘದ ಉಪಾಧ್ಯಕ್ಷ ಶ್ರೀಶೈಲ ಮಾಡ್ಯಾಳೆಯವರು ಮುಂಚೂಣಿಯಲ್ಲಿ ನಿಂತು ಘೋಷಣೆಗಳನ್ನು ಕೂಗಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಾ ಅಧ್ಯಕ್ಷರಾದ ನರಸಪ್ಪ ಬಿರಾದಾರ್, ಕಾರ್ಯದರ್ಶಿ ಮನ್ಸೂರ್ ಮುಜಾವರ್ ಸೇರಿದಂತೆ ಆಳಂದ ತಾಲೂಕಿನ ಹಲವಾರು ಶಿಕ್ಷಕರು ಈ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

“ಈಗಾಗಲೇ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಮತ್ತೆ ಪರೀಕ್ಷೆ ಬರೆಯಲು ಒತ್ತಾಯ ಮಾಡುವುದು ಅನ್ಯಾಯ” ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದೆಲ್ಲೆಡೆಯಿಂದ ಆಗಮಿಸಿದ ಸಾವಿರಾರು ಶಿಕ್ಷಕರು ಈ ಹೋರಾಟದಲ್ಲಿ ಭಾಗಿಯಾಗಿದ್ದು, ಸರ್ಕಾರ ಶೀಘ್ರದಲ್ಲಿ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.

Leave A Reply

Your email address will not be published.