ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಣ್ಣ ಹಳಕಟ್ಟಿ ಅವರು ಮುಂಬಯಿಯ ಮಧ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ (ಝಡ್ಆರ್ಯುಸಿಸಿ) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
ಮಧ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಝಡ್ಆರ್ಯುಸಿಸಿ ಕಾರ್ಯದರ್ಶಿ ದಿನೇಶ ವಸಿಷ್ಠ ಅವರು ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ.
ಹಳಕಟ್ಟಿ ಅವರ ಅಧಿಕಾರಾವಧಿ 2021ರ ಫೆ. 1ರಿಂದ 2023ರ ಜನವರಿ 31ರವರೆಗೆ ಇರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಧ್ಯ ರೈಲ್ವೆಯಡಿ ಮುಂಬಯಿ, ಪುಣೆ, ನಾಗಪುರ, ಭೋಸಾವಲ್ ಮತ್ತು ಸೋಲಾಪುರ ವಿಭಾಗಗಳಿದ್ದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳ ವ್ಯಾಪ್ತಿ ಹೊಂದಿದೆ.
ವಿಜಯಕುಮಾರ ಹಳಕಟ್ಟಿ ಅವರು ಕಳೆದ ಮೂರು ದಶಕಗಳಿಂದಲೂ ಬಿಜೆಪಿಯಲ್ಲಿ ಸಕ್ರಿಯ ಸದಸ್ಯರಾಗಿದ್ದು, ಪಕ್ಷದ ವಿವಿಧ ಪದಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಹಲವು ವರ್ಷಗಳ ಬಳಿಕ ಈ ಭಾಗದವರೊಬ್ಬರು ರೈಲ್ವೆಯ ಉನ್ನತ ಸಮಿತಿಗೆ ನೇಮಕಗೊಂಡಿದ್ದು, ಈ ಭಾಗದ ರೈಲ್ವೆ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸ್ಪಂದನೆ ಸಿಗುವದೆಂದು ನಿರೀಕ್ಷಿಸಲಾಗಿದೆ.
ಬಿಜೆಪಿ ವರಿಷ್ಠರು, ಸ್ಥಳೀಯ ಸಂಸದರು, ಶಾಸಕರು ನನ್ನ ಮೇಲೆ ವಿಶ್ವಾಸವಿರಿಸಿ ರೈಲ್ವೆ ಸಮಿತಿಗೆ ನೇಮಿಸಿದ್ದು, ಅವರೆಲ್ಲರಿಗೂ ಆಭಾರಿಯಾಗಿದ್ದೇನೆ. ಅವರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಮತ್ತು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿ ಈ ಭಾಗಕ್ಕೆ ಹೆಚ್ಚಿನ ರೈಲ್ವೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
– ವಿಜಯಕುಮಾರ ಹಳಕಟ್ಟಿ
ಝಡ್ಆರ್ಯುಸಿಸಿ ಸದಸ್ಯರು
Comments are closed.