ಕಲಬುರಗಿಯಲ್ಲಿ ಗುರುವಾರ ಸಂಜೆ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 239ನೇ ನಗರ ಸಂಕೀರ್ತನೆ ನಡೆಯಿತು. ಶೇಷಗಿರಿ ಹುಣಸಗಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಡಾ. ಗುರುರಾಜ ನವಲಿ, ರಾಜು ಕಮಲಾಪುರ ಪಾಲ್ಗೊಂಡಿದ್ದರು.
ಕಲಬುರಗಿ: ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸುಲಭ ವಿಧಾನವೆಂದರೆ ಭಕ್ತಿಯಿಂದ ಹರಿನಾಮ ಸ್ಮರಣೆ ಮಾಡುವುದಾಗಿದ್ದು, ಅದಕ್ಕಾಗಿ ನಿತ್ಯವೂ ಹರಿವಾಯುಗುರುಗಳ ಸ್ಮರಣೆ ಮಾಡಿ ಕೃತಾರ್ಥರಾಗಬೇಕೆಂದು ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಗೌರವ ಅಧ್ಯಕ್ಷರಾದ ಪಂ. ಗೋಪಾಲಾಚಾರ್ಯ ಅಕಮಂಚಿ ಹೇಳಿದರು.
ಏಕಾದಶಿ ಪ್ರಯುಕ್ತ ಗುರುವಾರ ಸಂಜೆ ನಗರದ ಕೋರಂಟಿ ಹನುಮಾನ ದೇವಸ್ಥಾನದಲ್ಲಿ ಉತ್ತರಾದಿ ಮಠದ ವಿಶ್ವಮಧ್ವ ಮಹಾಪರಿಷತ್ತಿನ ಅಂಗಸಂಸ್ಥೆಯಾದ ನಗರದ ಹರಿದಾಸ ಸಾಹಿತ್ಯ ಪ್ರಚಾರವಾಹಿನಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 239ನೇ ನಗರ ಸಂಕೀರ್ತನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಪ್ರವಚನ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ದಾಸಸಾಹಿತ್ಯ ಪ್ರಾಜೆಕ್ಟ್ನ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಏಕಾದಶಿಯಂತಹ ಪುಣ್ಯ ಪರ್ವದಿನಗಳಲ್ಲಿ ನಡೆಸುವ ಹರಿನಾಮ ಸಂಕೀರ್ತನೆಗೆ ವಿಶೇಷ ಫಲವಿದೆ, ಹರಿನಾಮ ಸ್ಮರಿಸುವಾಗ ಅರ್ಥ ತಿಳಿದು ಭಕ್ತಿಯಿಂದ ಮಾಡಬೇಕು, ಅದರಿಂದ ಭಗವಂತ ಸಂಪ್ರೀತನಾಗಿ ಅನುಗ್ರಹಿಸುತ್ತಾನೆ ಎಂದು ಆಚಾರ್ಯರು ಹೇಳಿದರು.
ಶ್ರೀ ಪಾಂಡುರಂಗ ಭಜನಾ ಮಂಡಳಿಯ ಸುಹಾಸಿನಿಯರಿಂದ ಶ್ರೀ ಲಕ್ಷ್ಮೀಶೋಭಾನ ಹಾಗೂ ಹರಿಕಥಾಮೃತಸಾರ ಸಾಮೂಹಿಕ ಪಾರಾಯಣ ನಡೆಯಿತು. ಕೋರಂಟಿ ಹನುಮಾನ ದೇವಸ್ಥಾನದ ಧರ್ಮದರ್ಶಿಗಳಾದ ರಾಜು ಕಮಲಾಪುರಕರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
“ಹರಿದಾಸ ಅನುಗ್ರಹ ಪ್ರಶಸ್ತಿ” ಪುರಸ್ಕøತರಾದ ಪತ್ರಕರ್ತ ಶೇಷಗಿರಿ ಹುಣಸಗಿ ಹಾಗೂ ಅಮೆರಿಕೆಯ ಫ್ಲೋರಿಡಾ ವಿಶ್ವವಿದ್ಯಾಲಯದಿಂದ ಹರಿದಾಸ ಸಾಹಿತ್ಯದಲ್ಲಿ ಪಿಎಚ್.ಡಿ ಪಡೆದಿರುವ ಡಾ. ಗುರುರಾಜ ಕೃ. ನವಲಿ ಅವರನ್ನು ಸನ್ಮಾನಿಸಲಾಯಿತು. ದಿ. ಪದ್ಮಾವತಿ ವ್ಯಾಸಮುದ್ರ ಸ್ಮರಣಾರ್ಥ ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ಹತ್ತು ಸಾಧಕರಿಗೆ ಬಹುಮಾನ ವಿತರಿಸಲಾಯಿತು.
ದಾಸಸಾಹಿತ್ಯ ವಿದ್ವಾಂಸ ವ್ಯಾಸರಾಜ ಸಂತೆಕೆಲ್ಲೂರ ನಿರೂಪಿಸಿದರು. ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಸಂಚಾಲಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ ವೇದಿಕೆಯ ಮೇಲಿದ್ದರು.
Comments are closed.