Shubhashaya News

ಸಮಾಜಕ್ಕೆ ಹೃದಯವಂತರ ಅವಶ್ಯಕತೆಯಿದೆ: ಚನ್ನವೀರ ಶ್ರೀ

ಆಳಂದ: ತಂಬಾಕವಾಡಿಯ ಜಕ್ಕೇಶ್ವರಿ ಜಾತ್ರಾ ಮಹೋತ್ಸವದ ಧರ್ಮಸ¨ಯನ್ನು ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿದರು.

ಆಳಂದ: ಸಮಾಜದಲ್ಲಿ ಜ್ಞಾನವಂತ, ಬುದ್ದಿವಂತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಾತು ಮತ್ತು ಕೃತಿಯಲ್ಲಿ ಒಂದಾಗಿರುವ, ಸಮಾಜದಲ್ಲಿರುವ ಬಡವರು, ಅಸಹಾಯಕರ ಕಣ್ಣೀರು ಒರೆಸುವ, ಸಹಾಯ ಹಸ್ತ ಚಾಚುವ, ಜಾತಿ-ಧರ್ಮವನ್ನು ಮೀರಿ, ಸರ್ವರನ್ನು ಪ್ರೀತಿಯಿಂದ ಕಾಣುವ, ತಂದೆ-ತಾಯಿ, ಗುರು-ಹಿರಿಯರು, ಜನ್ಮಭೂಮಿ, ಗುರು-ಲಿಂಗ-ಜಂಗಮ ಪ್ರೇಮಿಗಳಾಗಿರುವ ಹೃದಯವಂತ ಜನರು ಪ್ರಸ್ತುತ ಸಮಾಜಕ್ಕೆ ಅವಶ್ಯಕತೆಯಿದ್ದು, ಅವರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ಹಾರಕೂಡ ಮಠದ ಡಾ.ಚನ್ನವೀರ ಶಿವಾಚಾರ್ಯರು ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಹಾಳ ತಡಕಲ(ತಂಬಾಕವಾಡಿ)ಯ ಜಕ್ಕೇಶ್ವರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಸಂಜೆ ಜರುಗಿದ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ತಾಯಿ ಮಡಿಲು, ತಂದೆಯ ಹೆಗಲು ಪವಿತ್ರ ಸ್ಥಳಗಳು. ಅವರನ್ನು ಚನ್ನಾಗಿ ನೋಡಿಕೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರ ನೀಡಿ. ಯುವಕರು ದೇಶದ ಅಮೂಲ್ಯ ಆಸ್ತಿಯಾಗಿದ್ದು, ದುಶ್ಚಟಗಳಿಗೆ ಬಲಿಯಾಗಬೇಡಿ. ಯುವಶಕ್ತಿಯ ಸದ್ಬಳಕೆಯ ಅಗತ್ಯವಿದೆ. ಜೀವನದಲ್ಲಿ ಮುಂದೆ ಗುರಿ, ಹಿಂದೆ ಗುರುವಿರಬೇಕು. ಭೌತಿಕ ಸಂಪತ್ತಿಗಿಂದ ಅಧ್ಯಾತ್ಮಿಕ ಸಂಪತ್ತು ದೊಡ್ಡದು. ಸಾಮಾಜಿಕ ಪಿಡುಗಾದ ವರದಕ್ಷಿಣೆ ತೊಲಗಬೇಕು. ಹಳ್ಳಿ,ಪಟ್ಟಣ, ನಗರಗಳಿಂದು ಸೌಹಾರ್ಧತೆಯ ಸ್ಥಳಗಳಾಗಬೇಕಾಗಿದೆ. ಸಮ ಸಮಾಜ ನಿರ್ಮಾಣಕ್ಕೆ ಶರಣರಾದ ಬಸವೇಶ್ವರ, ಸಿದ್ದರಾಮೇಶ್ವರ ಸೇರಿದಂತೆ ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ ಎಂದರು.
ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು, ಸಮಾಜ ಸೇವಕರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಎಚ್.ಮಂಗಾಣೆ, ರಾಜಕುಮಾರ ಬಟಗೇರಿ ಸೇರಿದಂತೆ ಇನ್ನಿತರರಿಗೆ ಸತ್ಕರಿಸಿ, ಗೌರವಿಸಲಾಯಿತು. ಶರಣ ಸಿದ್ದರಾಮೇಶ್ವರರ ಪುರಾಣವನ್ನು ಪ್ರವಚನಕಾರ ಸಿದ್ದಯ್ಯ ಶಾಸ್ತ್ರೀ ನಡೆಸಿಕೊಟ್ಟರು. ಗವಾಯಿಗಳಾದ ಶಿವಶರಣಪ್ಪ ಹಿತ್ತಲ ಶಿರೂರ್ ಸಂಗೀತ ಸೇವೆ, ಬಸವರಾಜ ಆಳಂದ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್. ಎಸ್. ಮಾಲಿಪಾಟೀಲ್, ಉಪಾಧ್ಯಕ್ಷ ಶೇಖರ್ ಪಾಟೀಲ್, ಸದಸ್ಯರಾದ ವಿಠಲ ಕಾಂದೆ, ಬಸವರಾಜ ಬರುಡೆ, ಪ್ರಮುಖರಾದ ಹಣಮಂತರಾಯ ಕಾಂದೆ, ಶರಣಬಸಪ್ಪ ಎಚ್.ಕಾಂದೆ, ದೇವೇಂದ್ರಪ್ಪ ಕಾಂದೆ, ಹಣಮಂತರಾವ ಪಾಟೀಲ್, ಬಸವಂತರಾವ ಮುಲಗೆ, ಗುರುಲಿಂಗಪ್ಪ ಪಾಟೋಲ್, ಚನ್ನಪ್ಪ ಕಾಂದೆ, ಶಿವಾನಂದ ಕೊಳ್ಳುರೆ, ಮಲ್ಲು ಕೊಳ್ಳುರೆ, ಸಿದ್ರಾಮಪ್ಪ ಕಾಂದೆ, ಚಂದ್ರಕಾಂತ ತಂಬಾಕೆ, ಸುಬ್ಬಣ್ಣ ಭುಜುರಕೆ, ಶರಣಸಪ್ಪ ಬರುಡೆ, ಸೂರ್ಯಕಾಂತ ಭುಜುರಕೆ ಹಾಗೂ ಗ್ರಾಮಸ್ಥರು, ಸುತ್ತಲಿನ ಗ್ರಾಮಗಳ ಅನೇಕ ಜನರು ಭಾಗವಹಿಸಿದ್ದರು.

Leave A Reply

Your email address will not be published.