Shubhashaya News

ಶೇ.60 ಕಮಿಷನ್, ಸರಕಾರಿ ನೌಕರರ ಆತ್ಮಹತ್ಯೆ- ಇವು ಸಾಧನೆಯೇ?: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

ಮೂರು ವರ್ಷಗಳಲ್ಲಿ ನಮ್ಮ ಸಾಧನೆ ಇಂಥದ್ದೆಂದು ಕಾಂಗ್ರೆಸ್ ಮುಖಂಡರು ಹೇಳಲಿ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಹಗರಣಗಳೇ ನಿಮ್ಮ ಸಾಧನೆಯೇ? ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಲೂಟಿ ಹೊಡೆದು ನಮ್ಮ ಒಬ್ಬ ಸಚಿವ ಜೈಲಿಗೆ ಹೋದ ಎಂಬುದು ಸಾಧನೆಯೇ ಎಂದು ಪ್ರಶ್ನಿಸಿದರು. ಎಸ್.ಇ.ಪಿ., ಟಿಎಸ್ಪಿ ಹಣ ದುರುಪಯೋಗ ಸಾಧನೆಯೇ ಎಂದು ಕೇಳಿದರು.

ಸಾಧನೆಯ ಕಾರಣಕ್ಕಾಗಿ ಕೆಎಸ್ಆರ್ಟಿಸಿ ನೌಕರರು ಚಳವಳಿಗೆ ಕರೆ ಕೊಟ್ಟಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. 3 ಗಂಟೆಯೂ ರೈತರ ಪಂಪ್ಸೆಟ್ಗಳಿಗೆ 3 ಫೇಸ್ ಕರೆಂಟ್ ಕೊಡುತ್ತಿಲ್ಲ. ಇದು ಸಾಧನೆಯೇ? 3 ವರ್ಷದಲ್ಲಿ ಕರ್ನಾಟಕದ ಜನರು ಹೆಮ್ಮೆ ಪಡುವಂತೆ, ತಲೆಯೆತ್ತಿ ನಿಲ್ಲುವಂತೆ, ಇಡೀ ದೇಶದಲ್ಲಿ ಹೇಳಿಕೊಂಡು ಓಡಾಡುವಂತೆ ಯಾವ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಶೇ 60 ಕಮಿಷನ್- ಅದು ಸಾಧನೆಯೇ? ಸರಕಾರಿ ನೌಕರರ ಆತ್ಮಹತ್ಯೆ- ಅದು ಸಾಧನೆಯೇ? ಎಂದ ಅವರು, ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತಾರೋ ಎಂಬ ಗ್ಯಾರಂಟಿ ಸಿದ್ದರಾಮಯ್ಯನವರಿಗೇ ಇಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು. ಅವರ ಕುರ್ಚಿ ಬಗ್ಗೆ ಗ್ಯಾರಂಟಿ ಇಲ್ಲದ ಅವರು, ಇನ್ಯಾವ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಎಂದು ಕೇಳಿದರು.

ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ?

ಕರ್ನಾಟಕ ರಾಜ್ಯದ ಸಮಗ್ರ ಸಾಲ 10 ಲಕ್ಷ ಕೋಟಿ ರೂಪಾಯಿ. ಸಾಲ ಮಾಡದೇ ಗ್ಯಾರಂಟಿ ಯೋಜನೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಸಾಧನೆ ಯಾವುದು ಎಂದು ಪ್ರಶ್ನೆ ಮಾಡಿದರು. ಹೆಮ್ಮೆ ಪಟ್ಟುಕೊಳ್ಳುವ ಸಾಧನೆ ಏನಿದೆ ಎಂದು ಕೇಳಿದರು.

ಪೆಟ್ರೋಲ್- ಡೀಸೆಲ್ ಮೇಲೆ ಕರ್ನಾಟಕ ಸರಕಾರ ಹಾಕಿದ ಸೆಸ್ ಜಾಸ್ತಿಯೇ ಅಥವಾ ಕೇಂದ್ರ ಸರಕಾರ ಹಾಕಿದ ಸೆಸ್ ಹೆಚ್ಚೇ ಎಂದು ಪ್ರಶ್ನಿಸಿದರು. ಕರ್ನಾಟಕ ಸರಕಾರ ಪೆಟ್ರೋಲ್- ಡೀಸೆಲ್ ಮೇಲೆ ಮೂರು ಬಾರಿ ಸೆಸ್ ಹಾಕಿದೆ ಎಂದು ಟೀಕಿಸಿದರು. ಕೇಂದ್ರ ಸರಕಾರ ಬೆಲೆ ಇಳಿಸಿದ ಮೇಲೂ ಸೆಸ್ ಹಾಕಿದ್ದು ಯಾಕೆ ಎಂದು ಕೇಳಿದರು. ಸೆಸ್ ಇಳಿಸಿ; ನಿಮ್ಮ ತೆರಿಗೆ ಹೆಚ್ಚೇ ಕೇಂದ್ರ ಸರಕಾರದ್ದು ಹೆಚ್ಚು ತೆರಿಗೆಯೇ ಎಂಬ ಚರ್ಚೆ ಆಗಲಿ ಎಂದು ಒತ್ತಾಯಿಸಿದರು.

ಉಪ ಚುನಾವಣೆಯಲ್ಲಿ ಜನಾದೇಶ ಖರೀದಿ

ಉಪ ಚುನಾವಣೆಯ ಗೆಲುವಿನ ಮರ್ಮ ಏನೆಂದು ಖಾಸಗಿಯಾಗಿ ಕೇಳಿದರೆ ಕಾಂಗ್ರೆಸ್ಸಿನವರೇ ಹೇಳುತ್ತಾರೆ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವು ತನ್ನೆಲ್ಲ ಸಂಪತ್ತು, ಸಂಪನ್ಮೂಲ ಬಳಸಿ ಜನಾದೇಶವನ್ನು ಖರೀದಿ ಮಾಡುತ್ತದೆ. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಗೆದ್ದಿದ್ದರು. 5ನೇ ತಿಂಗಳಿಗೆ ಸಾರ್ವತ್ರಿಕ ಚುನಾವಣೆ ಆಗಿ ಸೋತರು. ಇದಕ್ಕೇನು ಹೇಳುತ್ತೀರಿ? ಗುಂಡ್ಲುಪೇಟೆ, ನಂಜನಗೂಡು ಮಾತ್ರವಲ್ಲ; ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳೂ ಸೋತರು. ಇದಕ್ಕೆ ಏನು ಹೇಳುವಿರಿ ಎಂದು ಕೇಳಿದರು.

Leave A Reply

Your email address will not be published.