Shubhashaya News

ತಾಲೂಕಿನಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಪಾಟೀಲ್

ಚಿತ್ತಾಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ತಾಲೂಕಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಸಂಪೂರ್ಣ ಮಾಹಿತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಪಡೆದುಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ತಾಕೀತು ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಕಾಲ ಶುರುವಾಗಿದ್ದರಿಂದ ತಾಲೂಕಿನಲ್ಲಿ ನೀರಿನ ಆಹಾಕಾರ ಉಂಟಾಗುತ್ತದೆ. ಹೀಗಾಗಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಇದೇಯೋ ಅಥವಾ ಇಲ್ಲವೋ ಎನ್ನುವುದನ್ನು ಪರೀಶಿಲಿಸಿಕೊಂಡು ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್ ರುಕುಮ್ ಪಟೇಲ್ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಲಾಗಿದೆ. ಹೊಸ್ಸುರ್, ರಾಜೋಳ್ಳಾ, ದಿಗ್ಗಾಂವ ಮತ್ತು ಆಲೂರ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ. ಆ ಗ್ರಾಮಗಳಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿದಿದೆ. ಹೊಸ್ಸುರ್ ಗ್ರಾಮದಲ್ಲಿ ಕಳೆದ ಸಾಲಿನಲ್ಲಿ ನಾಲ್ಕೈದು ಕೊಳವಿ ಬಾವಿ ಕೊರೆಸಲಾಗಿತ್ತು. ನೀರು ಲಭ್ಯವಾಗಿಲ್ಲ. ದೂರದಿಂದ ನೀರು ತರರುವ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಲಿ ಹಣ ಪಾವತಿಗೆ ಏನಾದರೊಂದು ನೆಪ ಹೇಳುವ ಅಧಿಕಾರಿಗಳು ಕೆಲಸವೇ ಮಾಡದೆ ಮನೆಯಲ್ಲಿ ಇರುವವರಿಗೆ ಕೂಲಿ ಹಣ ಪಾವತಿ ಮಾಡುತ್ತಿದ್ದಾರೆ. ಇದು ಅಧಿಕಾರ ದುರ್ಬಳಕೆ ಮತ್ತು ಹಣ ದುರುಪಯೋಗ ಎಂದು ತಾಪಂ ಸದಸ್ಯರಾದ ಬಸವರಾಜ ಹೊಸ್ಸಳ್ಳಿ, ಸುಧೀರ ಬೆಳೆಪ್ಪ ಗಂಭಿರ ಆರೋಪ ಮಾಡಿದರು.
ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರಿಗೆ ಕೊರೊನಾ ಹರಡಿದ್ದು ಪತ್ತೆಯಾಗಿತ್ತು. ಪುನಃ ಅವರನ್ನು ವಾಪಸ್ಸು ಕಳುಹಿಸಲಾಗಿದೆ. ಏ. 1 ರಿಂದ 45 ವರ್ಷದ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಪಾಟೀಲ್ ಹೇಳಿದರು.
ಕೋವಿಡ್-19 ಎರಡನೇ ಅಲೆ ಶುರುವಾದ ನಂತರ ತಾಲೂಕಿನಲ್ಲಿ ಒಟ್ಟು 62 ಸಕ್ರೀಯ ಪ್ರಕರಣಗಳಿವೆ. ವೈರಸ್ ಹರಡಿದ 8 ಜನರು ಜಿಲ್ಲಾ ಕೇಂದ್ರದ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 54 ಜನರು ಮನೆಯಲ್ಲಿ ಐಸೋಲೇಷನ್‍ನಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.
1 ರಿಂದ 5ನೇ ತರಗತಿ ಮಕ್ಕಳ ಮನೆ ಬಾಗಿಲಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕ, ಮದ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯ ತಲುಪಿಸಲಾಗಿದೆ. ಪ್ರಸ್ತುತ ವರ್ಷದ 10 ನೇ ತರಗತಿ ವಾರ್ಷಿಕ ಪರೀಕ್ಷೆಯ ಶೇ.60ಕ್ಕಿಂತ ಅಧಿಕ ಫಲಿತಾಂಶ ಸಾಧನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಹೇಳಿದರು.
ನಾಗಾವಿ ಕ್ಯಾಂಪಸ್ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಅನುಕೂಲಕ್ಕೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಮಾಡಬೇಕು. ಈ ಹಿಂದೇ ಹೇಳಿದರೂ ಯಾಕೆ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ, ತೊಂದರೆಯಾಗುತ್ತಿದೆ. ಶಾಲೆಯ ಆರಂಭ ಮತ್ತು ಬಿಡುವ ಸಮಯದಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಸಾರಿಗೆ ಸಂಸ್ಥೆ ಅಧಿಕಾರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಸದಸ್ಯರಾದ ನಾಮದೇವ ರಾಠೋಡ, ರಸೂಲ್ ಸಾಬ್, ಮುನಿಯಪ್ಪ ಕೊಳ್ಳಿ, ಮಲ್ಲಣ್ಣ ಸಣಮೋ, ಭಾಗಪ್ಪ, ರವಿ ಪಡ್ಲ, ಸುಧೀರ, ಮಹಾದೇವಿ, ಜಯಶ್ರೀ, ತಾಪಂ ವ್ಯವಸ್ಥಾಪಕ ಅಮೃತ ಕ್ಷೀರಸಾಗರ ಸೇರಿದಂತೆ ಇತರರು ಇದ್ದರು.
ಪ್ರಭುಲಿಂಗ ಧನ್ನಾ ಅವರು ಸಭಾ ನಡಾವಳಿ ದಾಖಲಿಸಿದರು.

Comments are closed.

Don`t copy text!