ಚಿತ್ತಾಪುರ: ತಾಲೂಕಿನ ಅಲ್ಲೂರ ಕೆ. ಆಸ್ಪತ್ರೆಗೆ ಸಂಸದ ಡಾ. ಉಮೇಶ ಜಾಧವ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ತಾಪುರ: ತಾಲೂಕಿನ ಅಲ್ಲೂರ (ಕೆ) ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 20 ಹಾಸಿಗೆಯುಳ್ಳ ಮೇಲ್ದರ್ಜೆ ಆಸ್ಪತ್ರೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಸಂಸದ ಡಾ. ಉಮೇಶ ಜಾಧವ ಭರವಸೆ ನೀಡಿದರು.
ತಾಲೂಕಿನ ಅಲ್ಲೂರ (ಕೆ) ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಆಸ್ಪತ್ರೆ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿವೆ. ಅಲ್ಲೂರ (ಬಿ) ಗ್ರಾಮದಲ್ಲಿ ಸುಮಾರು 20ಕ್ಕೂ ಅಧಿಕ ಜನರು ಮರಣ ಹೊಂದಿದ್ದಾರೆ ಎಂಬ ಮಾಹಿತಿಯಿದೆ. ಈ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ 20 ಹಾಸಿಗೆಯುಳ್ಳ ಆಸ್ಪ್ರತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವದು. ಜನರೇಟರ್ ಹಾಗೂ ಅಂಬುಲೇನ್ಸ್ ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಕೊರತೆಯಾಗದಂತೆ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಇಷ್ಟೋಂದು ಕೊರೊನಾ ಸೋಂಕು ಇದ್ದರೂ ಯಾವ ಅಧಿಕಾರಿಗಳು ಇದುವರೆಗೆ ಭೇಟಿ ನೀಡಿಲ್ಲ. ಇಲ್ಲಿ ವೈದ್ಯರು ಇರುವುದಿಲ್ಲ. ನರ್ಸಗಳೇ ವೈದ್ಯರ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಾತ್ರಿ ಕರೆಂಟ್ ಇರುವುದಿಲ್ಲ. ಮೊಬೈಲ್ ಬೆಳಕಿನಲ್ಲಿ ಹೆರಿಗೆ ಮಾಡಿದ ಉದಾಹರಣೆಗಳಿವೆ. ಶೌಚಾಲಯ ಸರಿಯಾಗಿ ವ್ಯವಸ್ಥೆಯಿಲ್ಲ ಎಂದು ಅಲ್ಲೂರ ಕೆ ನಿವಾಸಿ ಬಸವರಾಜ ತಳವಾರ ಸಂಸದರ ಗಮನಕ್ಕೆ ತಂದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ್, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಪಾಟೀಲ್, ತಾಪಂ ಇಒ ನೀಲಗಂಗಾ ಬಬಲಾದ, ಅಂಬಿಗರ ಚೌಡಯ್ಯ ನಿಗಮ ನಿರ್ದೇಶಕ ಶರಣಪ್ಪ ನಾಟಿಕಾರ, ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಮುಖಂಡರಾದ ಅಶ್ವಥ ರಾಠೋಡ, ಶರಣಗೌಡ ಭೀಮನಹಳ್ಳಿ, ಮುರಗೇಂದ್ರ ಭಜಂತ್ರಿ, ಶಂಕರ ವಿಜಾಪುರ, ಮಲ್ಲಯ್ಯ ಮುತ್ಯಾ, ಭೀಮಣ್ಣ ಸೀಬಾ, ಅಯ್ಯಪ್ಪ ರಾಮತಿರ್ಥ ಇದ್ದರು.
Prev Post
Next Post