ಚಿಂಚೋಳಿ: ತಾಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಚೆಟ್ಟಿನಾಡ್ ಸಿಮೆಂಟ್ಸ್ ಕಂಪನಿಯ ಗಣಿಗಾರಿಕೆ, ಬ್ಲಾಸ್ಟಿಂಗ್ ಹಾಗೂ ಕ್ಲಿಂಕರ್ ಸಾಗಾಟದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರವಿಶಂಕರ್ ರೆಡ್ಡಿ ಮುತ್ತಂಗಿ ಆರೋಪಿಸಿದ್ದಾರೆ.
ಏ.29ರಂದು ಜೆಡಿಎಸ್ ನೇತೃತ್ವದಲ್ಲಿ ಧರಣಿ ನಡೆಸಿ ಸಮಸ್ಯೆ ಪರಿಹಾರಕ್ಕೆ ಒಂದು ತಿಂಗಳ ಗಡುವು ನೀಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಬ್ಲಾಸ್ಟಿಂಗ್ನಿಂದ 40–50 ಮನೆಗಳಿಗೆ ಬಿರುಕು ಬಿದ್ದಿದ್ದು, ಹಾನಿಗೊಳಗಾದ ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಉದ್ಯೋಗ, ಸ್ಥಳೀಯರಿಗೆ ಆದ್ಯತೆ, ಸಿಎಸ್ಆರ್ ನಿಧಿಯ ಬಳಕೆ ಕುರಿತು ತನಿಖೆ ಹಾಗೂ ಪರಿಸರ, ಆರೋಗ್ಯ ಮತ್ತು ಕೃಷಿ ಮೇಲಿನ ಪರಿಣಾಮಗಳ ಪರಿಶೀಲನೆ ನಡೆಸಬೇಕು. ನಿಯಮಬಾಹಿರ ಕ್ಲಿಂಕರ್ ಸಾಗಾಟ ಮತ್ತು ಬ್ಲಾಸ್ಟಿಂಗ್ಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಬೇಡಿಕೆ ಈಡೇರಿಸದಿದ್ದರೆ ಕಂಪನಿಯ ಮುಖ್ಯದ್ವಾರದ ಬಳಿ ಧರಣಿ ಹಾಗೂ ರಾಸ್ತಾ ರೋಕೋ ನಡೆಸಲಾಗುವುದು ಎಂದು ರವಿಶಂಕರ್ ರೆಡ್ಡಿ ಮುತ್ತಂಗಿ ಎಚ್ಚರಿಸಿದ್ದಾರೆ.