ಆಳಂದ: ಕಾರುಹುಣ್ಣಿಮೆ ಹಬ್ಬದ ಅಂಗವಾಗಿ ಪಟ್ಟಣದ ಮಾರುಕಟ್ಟೆಯಲ್ಲಿ ಎತ್ತುಗಳನ್ನು ಸಿಂಗರಿಸಲು ಬೇಕಾದ ಅಲಂಕಾರ ಸಾಮಗ್ರಿಗಳನ್ನು ಖರೀದಿಸುತ್ತಿರುವ ರೈತರು.
ಆಳಂದ: ನಾಳೆ (ಸೋಮವಾರ) ಆಚರಿಸಲಾಗುವ ಕಾರುಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತರು ಸಾಂಪ್ರದಾಯಿಕ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಪಟ್ಟಣದ ಮಾರುಕಟ್ಟೆ, ಮುಖ್ಯರಸ್ತೆಯಲ್ಲಿ ಎತ್ತುಗಳನ್ನು ಸಿಂಗರಿಸಲು ಬೇಕಾದ ಗಂಟೆಗಳು, ಬಣ್ಣದ ಹಗ್ಗಗಳು, ಕೊರಳಪಟ್ಟಿಗಳು, ನೆತ್ತಿಯ ಅಲಂಕಾರ, ಕೊಂಬುಗಳಿಗೆ ಬಣ್ಣ, ಹೂವಿನ ಮಾಲೆಗಳು ಸೇರಿದಂತೆ ವಿವಿಧ ಪೂಜಾ ಹಾಗೂ ಅಲಂಕಾರ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯಿತು.
ಕೃಷಿ ಯಾಂತ್ರೀಕರಣ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಉಳುಮೆ ಮತ್ತು ಬಿತ್ತನೆ ಕಾರ್ಯಗಳಿಗೆ ಹೆಚ್ಚಿನ ರೈತರು ಟ್ರಾಕ್ಟರ್ಗಳನ್ನೇ ಅವಲಂಬಿಸುತ್ತಿದ್ದರೂ, ಕಾರುಹುಣ್ಣೆ ಹಬ್ಬದ ಸಂದರ್ಭದಲ್ಲಿ ತಮ್ಮ ಕೃಷಿಗೆ ಬೆನ್ನೆಲುಬಾಗಿದ್ದ ಎತ್ತುಗಳು ಹಾಗೂ ಹೈನುಗಾರಿಕೆ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಮಾತ್ರ ಕೈಬಿಡದೆ ಮುಂದುವರಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ರೈತರು ಮಾತ್ರ ಈಗಲೂ ಎತ್ತುಗಳನ್ನು ಕೃಷಿ ಕಾರ್ಯಗಳಿಗೆ ಬಳಸುತ್ತಿದ್ದರೂ, ಎಲ್ಲ ರೈತರೂ ಈ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲು ಮುಂದಾಗಿದ್ದಾರೆ.
ಈ ಬಾರಿ ಬಾರದ ಮಳೆ, ಇನ್ನೂ ಬಿಡುಗಡೆಯಾಗದ ಎರಡನೇ ಕಂತಿನ ಬೆಳೆ ವಿಮೆ, ದುಬಾರಿ ಬೆಲೆಯ ಬೀಜ ಮತ್ತು ಗೊಬ್ಬರ, ಹೆಚ್ಚಿದ ಕೃಷಿ ವೆಚ್ಚ, ಇನ್ನೂ ಆರಂಭವಾಗದ ಬಿತ್ತನೆ ಕಾರ್ಯ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಇದರ ನಡುವೆಯೂ ಸಿಂಗರ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದರೂ ಅನಿವಾರ್ಯವಾಗಿ ಖರೀದಿಸಿ ಸಂಪ್ರದಾಯ ಉಳಿಸಿಕೊಳ್ಳುವ ಮನೋಭಾವ ರೈತರಲ್ಲಿ ಕಂಡುಬAದಿದೆ.
ಕಾರುಹುಣ್ಣೆ ದಿನ ಎತ್ತುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಬಳಿದು, ಹೊಸ ಅಲಂಕಾರಗಳಿAದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜಾನುವಾರುಗಳ ಆರೋಗ್ಯಕ್ಕಾಗಿ ರೈತರು ಪ್ರಾರ್ಥಿಸುತ್ತಾರೆ. ಕೃಷಿ ಸಂಸ್ಕೃತಿ ಮತ್ತು ಜಾನುವಾರುಗಳ ಮೇಲಿನ ಕೃತಜ್ಞತೆಯನ್ನು ಸಾರುವ ಈ ಹಬ್ಬ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದೆ.
ಹದವಾದ ಮಳೆ ಸುರಿದು ಬಿತ್ತನೆ ಸುಗಮವಾಗಿ ನಡೆಯಲಿ, ಉತ್ತಮ ಫಸಲು ದೊರೆತು ರೈತರ ಬದುಕು ಹಸನಾಗಲಿ ಹಾಗೂ ದೇಶಕ್ಕೆ ಆಹಾರ ಧಾನ್ಯ ಪೂರೈಸುವ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುವಂತಾಗಲಿ ಎಂಬ ಆಶಾಭಾವನೆಯೊಂದಿಗೆ ರೈತ ಸಮುದಾಯ ಕಾರುಹುಣ್ಣೆಮೆ ಹಬ್ಬವನ್ನು ಸ್ವಾಗತಿಸಲು ಎಂದಿನAತೆ ಸಜ್ಜಾಗಿದ್ದಾರೆ.