Shubhashaya News

ಕೊರೊನಾ ಎದುರಿಸಲು ಯಾವುದೇ ಕೊರತೆಯಿಲ್ಲ: ಜಾಧವ

ಚಿತ್ತಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಂಸದ ಡಾ. ಉಮೇಶ ಜಾಧವ ಭೇಟಿ ನೀಡಿ ಪರಿಶೀಲನೆ ಮಾಡಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ ಪಾಟೀಲ್ ಅವರೊಂದಿಗೆ ಚರ್ಚಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ರಿಂದ 40 ಹಾಸಿಗೆ ಹೆಚ್ಚಿಗೆ ಮಾಡಲು ಸೂಚಿಸಲಾಗಿದೆ. ಯಾವುದೇ ರೋಗಿಗಳಿಗೆ ನಿರ್ಲಕ್ಷ್ಯ ತೊರದೆ ಸರಿಯಾಗಿ ನೋಡಿಕೊಳ್ಳಬೇಕು. ಕೊರೊನಾ ರೋಗಿಗಳಿಗೆ ಮಾನಸಿಕ ಧೈರ್ಯ ತುಂಬಬೇಕು ಎಂದು ಜಾಧವ ಸೂಚಿಸಿದರು.
ಚಿತ್ತಾಪುರ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ, ಆಕ್ಸಿಜನ್ ಕೊರತೆಯಿಲ್ಲ. ಜಿಮ್ಸ್‍ನಲ್ಲಿ 180 ಇದ್ದ ಹಾಸಿಗೆಯನ್ನು 400 ವ್ಯವಸ್ಥೆ, ಸಿಬ್ಬಂದಿಗಳನ್ನು ಹೆಚ್ಚಿಗೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಲ್ಲ. ಈಗಾಗಲೆ ಜಿಲ್ಲೆಯಲ್ಲಿ 3 ಉತ್ಪನ ಘಟಕಗಳಿಗೆ ಸುಮಾರು ಲಿಕ್ವಿಡ್ ಆಕ್ಸ್ಸಿಜನ್ 800 ಸಿಲೇಂಡರ ಉತ್ಪ್ಪಾದಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶೇ.50 ರಷ್ಟು ಬೆಡ್ ಮೀಸಲಿಡಲಾಗಿದೆ ಎಂದರು.
ಕೊರೊನಾ ನಿಯಂತ್ರಿಸಲು ಪಕ್ಷಭೇದ ಮರೆತು ಎಲ್ಲರು ಪ್ರಯತ್ನಿಸಬೇಕಾಗಿದೆ. ಕೊರೊನಾ ಸೋಂಕಿತರಿಗೆ ಮಾನಸಿಕವಾಗಿ ಧೈರ್ಯ ತುಂಬವ ಕೆಲಸ ಮಾಡಬೇಕಾಗಿದೆ. ಯಾರು ಭಯಪಡಬಾರದು. ನಾನು ಮತ್ತು ನಮ್ಮ ಕುಟುಂಬ ಸಹಿತ 11 ಜನರಿಗೆ ಕೋವಿಡ್ ಸೋಂಕು ತಗುಲಿತ್ತು. ಭಯಪಡದೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ ಎಂದರು.
ಕೊರೋನಾ ನಿಯಂತ್ರಿಸಲು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಈಗ ಲಸಿಕೆ ಹಾಕಿಸಿಕೊಂಡ 60 ವರ್ಷದ ಮೇಲ್ಪಟ್ಟವರ ಸಾವು ಕಡಿಮೆಯಾಗಿದೆ. ಇಂದು ಯುವಕರು ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿವೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಯುವಕರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಲು ಆದೇಶ ಜಾರಿ ಮಾಡಿದ್ದಾರೆ ಎಂದು ಹೇಳಿದರು.
ಎಂಎಲ್‍ಸಿ ಬಿ.ಜಿ ಪಾಟೀಲ್ ಮಾತನಾಡಿ, ಕೊರೊನಾ ಲಸಿಕೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸೇರಿ ಹೆಚ್ಚಿನ ಪ್ರಚಾರ ಮಾಡಲು ಸೂಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ ಪಾಟೀಲ್ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಮಾಡಲು ನಾಗಾವಿಯಲ್ಲಿ ಸಿದ್ಧತೆ ನಡೆದಿದೆ. ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೊರೊನಾ ರೋಗಿಗಳಿಗೆ ಕಾಯ್ದಿರಿಸಲಾದ ಐಸಿ ರೂಂ ಪರಿಶೀಲನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಜಿಪಂ ಸದಸ್ಯ ಅರವಿಂದ ಚವ್ಹಾಣ, ತಾಲೂಕಾಧ್ಯಕ್ಷ ನೀಲಕಂಠ ಪಾಟೀಲ್, ಮುಖಂಡರಾದ ಬಸವರಾಜ ಬೆಣ್ಣೂರ್, ಮಲ್ಲಿಕಾರ್ಜುನ ಎಮ್ಮನೋರ್, ಚಂದ್ರಶೇಖರ ಅವಂಟಿ, ಅಶ್ವಥ ರಾಠೋಡ, ಮಲ್ಲಿಕಾರ್ಜುನ ಪೂಜಾರಿ, ನಾಗರಾಜ ಹೂಗಾರ, ರಾಮದಾಸ ಚವ್ಹಾಣ, ಅಶೋಕ ನಿಪ್ಪಾಣಿ, ರಮೇಶ ಬೊಮ್ಮನಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಇದ್ದರು.

Comments are closed.

Don`t copy text!