ಆಳಂದ: ತಾಲೂಕಿನಲ್ಲಿ ಸತತ ಮಳೆಯಿಂದ ಬೆಳೆ ಸೇರಿದಂತೆ ರಸ್ತೆ, ಸೇತುವೆ, ಜಮೀನು, ಮನೆಗಳ ಹಾನಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿರುವ ಅವರು, ಅಮರ್ಜಾ ಅಣೆಕಟ್ಟೆಯಲ್ಲಿ ಹಾಗೂ ಮೇಲ್ಬಾಗದ ನದಿಯಲ್ಲಿ ಭಾರಿ ಪ್ರವಾಹ ಆರ್ಭಟಿಸಿದ್ದು, ಜನಜೀವನವು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗುವುದರ ಜೊತೆಗೆ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಹೊಲಗಳಲ್ಲಿರುವ ಬಾವಿಗಳು ಒಡೆದುಹೋಗಿವೆ. ಕೆಲವು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡು ನಡುಗಡ್ಡೆಯಂತಾಗಿವೆ. ಜನರು, ಜಾನುವಾರುಗಳು ಜೀವನ-ಮರಣದ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿದಿಗಳ ಸಂಕಷ್ಟದ ಕಾಟಾಚಾರದ ಭೇಟಿ ಸಾಲದು, ತಕ್ಷಣಕ್ಕೆ ಪರಿಹಾರ ನೀಡುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಸತತ ಮಳೆಯಿಂದಾಗಿ ಆಳಂದ ಪಟ್ಟಣದ ಮಾಂಗವಾಡ, ರೇವಣಸಿದ್ಧೇಶ್ವರ ಕಾಲೋನಿ ಆಪೆಕ್ಸ ಶಾಲೆ ಹಿಂಬದಿಯ ಬಡಾವಣೆಯ ಕುಟುಂಬಗಳಿಗೆ ಹಾನಿಯಾಗಿ ತೊಂದರೆಯಾಗಿದೆ. ಮಾಡಿಯಾಳ ಕೆರೆ ಒಡೆದು ಅಲ್ಲಿನ ರೈತರ ಜಮೀನು ಹಾಗೂ ಬೆಳೆ ಹಾನಿಯಾಗಿದೆ. ಬೆಳೆಗಳು ಸಂಪೂರ್ಣ ನಾಶಗೊಂಡಿವೆ. ರಸ್ತೆಗಳೆಲ್ಲ ಕೆರೆಗಳಂತಾಗಿ, ಹಲವು ಗ್ರಾಮಗಳು ಸುಗಮ ಸಂಚಾರವಿಲ್ಲದಂತಾವೆ.
“ತಾಲೂಕಿನಲ್ಲಿ ಸತತ ಮಳೆಯಿಂದಾಗಿ ಬೆಳೆ ಹಾನಿ ಹಾಗೂ ಪ್ರವಾಹ ನೀರಿನಿಂದ ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು. ರೈತರಿಗೆ ಪರಿಹಾರ, ದನಕಾರರಿಗೆ ಸಹಾಯ, ರಸ್ತೆ ಸಂಪರ್ಕ ಮರ್ಪಟ್ಟು ಮನೆಗಳಿಗೆ ಆಹಾರ ಸರಬರಾಜು ಮಾಡುವಂತೆ ಈ ಕುರಿತು ಸೂಚಿಸಿ ತಕ್ಷಣ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಲೋಹಾರ ಒತ್ತಾಯಿಸಿದ್ದಾರೆ.