ಆಳಂದ: ಪಟ್ಟಣದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದ ಕರ್ತೃ ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯರಾಧನೆ ಮಹೋತ್ಸವ ಸೆ.4ರಂದು ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಇಂದಿಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಶ್ರೀಗಳು, ಅಂದು ಬೆಳಗಿನ ಜಾವ ಗದ್ದುಗೆಗೆ ರುದ್ರಾಭಿಷೇಕ ಸಹಸ್ರಬಿಲ್ವಾರ್ಚನೆ ನೆರವೇರುವುದು. ಬಳಿಕ ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ ಸಾಗಿ ಶ್ರೀಮಠಕ್ಕೆ ಬೆಳಗಿನ 10:00ಗಂಟೆಗೆ ತಲುಪಿದ ಬಳಿಕ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಆಳಂದ, ನಂದವಾಡಗಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು, ಕಡಗಂಚಿ ಕಟ್ಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಪಡಸಾವಳಿ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು, ಕೇಸರ ಜವಳಗಾ ಶ್ರೀ ವಿರಂತೇಶ್ವರ ಮಹಾಸ್ವಾಮಿಗಳು, ಅಕ್ಕಲಕೋಟ, ಕಿಣ್ಣಿಸುಲ್ತಾನ, ನರೋಣಾ ಮಠದ ಶ್ರೀಗಳು ಸೇರಿದಂತೆ ರಾಜಕೀಯ ಗಣ್ಯರು, ಹರಗುರು ಚರಮೂರ್ತಿಗಳು ಆಗಮಿಸಲಿದ್ದಾರೆ. ಎಂದಿನಂತೆ ಭಕ್ತಾದಿಗಳು ಪಾಲ್ಗೊಂಡು ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.