Shubhashaya News

ಹಂಗಾಮಿನ ಬಿತ್ತನೆ ಸಿದ್ಧತೆಗಾಗಿ ಭರದಿಂದ ಸಾಗಿದ ಮಾಗಿ ಉಳಿಮೆ

ಮಣ್ಣಿನ ಪರೀಕ್ಷೆ ಕೃಷಿ ನಿಯಮಗಳ ಜಾಗೃತಿಗೆ ವಿಜ್ಞಾನಿಗಳ ಸಲಹೆ

ಆಳಂದ: ಸಾಲೇಗಾಂವ ಗ್ರಾಮದಲ್ಲಿ ಶುಕ್ರವಾರ ಯುವ ರೈತನೋರ್ವ ಮಾಗಿ ಉಳಿಮೆಯಲ್ಲಿ ತೊಡಗಿ ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿದರು.

ಆಳಂದ: ಮುಂಗಾರು ಹಂಗಾಮು ಆರಂಭಕ್ಕೆ ಕೇವಲ 20 ದಿನಗಳು ಬಾಕಿಯಿರುವಂತೆ, ಇಲ್ಲಿನ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬೇಸಿಗೆಯ ವಿಪರೀತ ಬಿಸಿಲು ಝಳದ ನಡುವೆ ಚುರುಕುಗೊಳಿಸಿದ್ದಾರೆ.
ಹಂಗಾಮಿನ ಸಿದ್ಧತೆಗಾಗಿ ರೈತರು ಈಗಾಗಲೇ ಮಾಗಿ ಉಳಿಮೆಯಲ್ಲಿ ತೊಡಗಿದ್ದು, ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು, ಆಧುನಿಕ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳುವರಿಯ ಗುರಿಯನ್ನು ಹೊಂದಿದ್ದಾರೆ. ಸರ್ಕಾರದ ಬೆಂಬಲ ಮತ್ತು ಕೃಷಿ ತಜ್ಞರ ಮಾರ್ಗದರ್ಶನದೊಂದಿಗೆ, ಈ ಬಾರಿಯ ಮುಂಗಾರು ಕೃಷಿಯಲ್ಲಿ ರೈತರಿಗೆ ಯಶಸ್ಸು ಸಿಗಲಿ ಎಂಬ ನಿರೀಕ್ಷೆ ಎದುರು ನೋಡುವಂತಾಗಿದೆ.
ಬಿತ್ತನೆಗೆ ಸಿದ್ಧತೆಯಾಗಿ ಮಾಗಿ ಉಳಿಮೆಯನ್ನು ಆರಂಭಿಸಿರುವ ರೈತರು, ಜಮೀನಿನ ಫಲವತ್ತತೆಯನ್ನು ಹೆಚ್ಚಿಸಲು ಮಣ್ಣಿನ ಪರೀಕ್ಷೆಯ ಮಹತ್ವವನ್ನು ಅರಿತುಕೊಂಡಿದ್ದಾರೆ. ಕೃಷಿ ತಜ್ಞರು ಸಹ, ಉತ್ತಮ ಇಳುವರಿಗಾಗಿ ಮಾಗಿ ಉಳಿಮೆಯ ಲಾಭಗಳು, ಮಣ್ಣಿನ ಆರೋಗ್ಯವನ್ನು ಕಾಪಾಡುವ ಕ್ರಮಗಳು ಮತ್ತು ಮುಂಗಾರು ಬಿತ್ತನೆಗೆ ಅನುಸರಿಸಬೇಕಾದ ನಿಯಮಗಳ ಕುರಿತು ಸಲಹೆ ನೀಡುತಲ್ಲೆ ಇದ್ದಾರೆ.
ಮಾಗಿ ಉಳಿಮೆಯ ಪ್ರಯೋಜನಗಳು:
ಮಾಗಿ ಉಳಿಮೆಯು ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜಮೀನಿನ ಮಣ್ಣನ್ನು ಸಡಿಲಗೊಳಿಸಿ, ಗಾಳಿಯಾಡುವಿಕೆಯನ್ನು ಸುಧಾರಿಸುತ್ತದೆ ಮತ್ತು ಬೇರಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಕ್ರಿಯೆಯಿಂದ ಮಣ್ಣಿನಲ್ಲಿರುವ ಕಳೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಮತ್ತು ಸಾವಯವ ಗೊಬ್ಬರವನ್ನು ಸಮರ್ಪಕವಾಗಿ ಮಿಶ್ರಣಗೊಳಿಸಲು ಸಹಾಯವಾಗುತ್ತದೆ. ಮಾಗಿ ಉಳಿಮೆಯಿಂದ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ಇದು ಮುಂಗಾರು ಬೆಳೆಗಳಿಗೆ ಅತ್ಯಗತ್ಯ. ಕೃಷಿ ತಜ್ಞರ ಪ್ರಕಾರ, ಸರಿಯಾದ ಆಳದಲ್ಲಿ ಉಳುಮೆ ಮಾಡುವುದರಿಂದ ಮಣ್ಣಿನ ಫಲವತ್ತತೆ ದೀರ್ಘಕಾಲ ಕಾಯ್ದಿರಿಸಬಹುದು.
ಮಣ್ಣಿನ ಪರೀಕ್ಷೆ ಫಲವತ್ತತೆಯ ಕೀಲಿಕೈ:
ರೈತರು ತಮ್ಮ ಜಮೀನಿನ ಮಣ್ಣಿನ ಆರೋಗ್ಯವನ್ನು ಅರಿತುಕೊಳ್ಳಲು ಮಣ್ಣಿನ ಪರೀಕ್ಷೆ ಅತ್ಯಗತ್ಯ. ಮಣ್ಣಿನಲ್ಲಿ ಪೆÇೀಷಕಾಂಶಗಳ ಕೊರತೆ, ಪಿಎಚ್ ಮಟ್ಟ ಮತ್ತು ಸಾವಯವ ಒಡಲಿನ ಪ್ರಮಾಣವನ್ನು ತಿಳಿಯಲು ಈ ಪರೀಕ್ಷೆ ಸಹಾಯ ಮಾಡುತ್ತದೆ. ಕರ್ನಾಟಕದ ಕೃಷಿ ಇಲಾಖೆಯು ರಾಜ್ಯದಾದ್ಯಂತ ಮಣ್ಣಿನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಪರೀಕ್ಷಾ ವರದಿಯ ಆಧಾರದ ಮೇಲೆ, ರೈತರು ತಮ್ಮ ಬೆಳೆಗೆ ಸೂಕ್ತ ಗೊಬ್ಬರ ಮತ್ತು ರಾಸಾಯನಿಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಇದರಿಂದ ವೆಚ್ಚವನ್ನು ಕಡಿಮೆ ಮಾಡಿ, ಇಳುವರಿಯನ್ನು ಹೆಚ್ಚಿಸಬಹುದು. ಕೃಷಿ ವಿಜ್ಞಾನ ಕೇಂದ್ರಗಳು ಸಂಪರ್ಕಿಸಿದರೆ ರೈತರಿಗೆ ಈ ಕುರಿತು ಉಚಿತ ನೀಡಲಾಗುತ್ತದೆ ಎಂದು ಕಲಬುರಗಿ ಕೆವಿಕೆ ವಿಜ್ಞಾನಿ ಡಾ. ಜಹೀರ್ ಅಹ್ಮದ್ ಅವರು ಸಲಹೆ ನೀಡಿದ್ದಾರೆ.
ಮುಂಗಾರಿ ಹಂಗಾಮಿಗೆ ಸಿದ್ಧತೆ, ಅನುಸರಿಸಬೇಕಾದ ಕ್ರಮಗಳು:
ಜಮೀನಿನ ತಯಾರಿ: ಮಾಗಿ ಉಳಿಮೆಯ ನಂತರ, ಜಮೀನನ್ನು ಸಮತಟ್ಟುಗೊಳಿಸಿ, ಕಳೆಗಳನ್ನು ತೆಗೆದುಹಾಕಿ. ಇದರಿಂದ ಬಿತ್ತನೆ ಸುಲಭವಾಗುತ್ತದೆ ಮತ್ತು ನೀರಿನ ವ್ಯವಸ್ಥೆ ಸುಧಾರಿಸುತ್ತದೆ.
ಬೀಜದ ಆಯ್ಕೆ: ಕೃಷಿ ಇಲಾಖೆಯಿಂದ ಪ್ರಮಾಣೀಕೃತ, ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಿ. ಭತ್ತ, ಜೋಳ, ಹೆಸರು, ಉದ್ದು, ಸೋಯಾ, ತೊಗರಿ ಮತ್ತು ಮೆಕ್ಕೆ ಜೋಳದಂತಹ ಬೆಳೆಗಳು ಮುಂಗಾರು ಹಂಗಾಮಿಗೆ ಸೂಕ್ತವಾಗಿವೆ.
ಗೊಬ್ಬರ ವ್ಯವಸ್ಥಾಪನೆ: ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆ ಮಾಡಿ. ಜೈವಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲ ಕಾಪಾಡಬಹುದು.
ನೀರಾವರಿ ಯೋಜನೆ: ಮುಂಗಾರಿನ ಅನಿಶ್ಚಿತ ಮಳೆಯನ್ನು ಗಮನದಲ್ಲಿಟ್ಟುಕೊಂಡು, ಹನಿ ನೀರಾವರಿ ಅಥವಾ ತೊಟ್ಟಿ ನೀರಾವರಿಯಂತಹ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಕೀಟ ಹತೋಟಿ: ಸಾವಯವ ಕೀಟನಾಶಕಗಳ ಬಳಕೆಯನ್ನು ಆದ್ಯತೆ ನೀಡಿ. ಬಿಹಾರದ ರೈತರಂತೆ ಬಿದಿರಿನ ದ್ರಾವಣವನ್ನು ತಯಾರಿಸಿ ಕೀಟ ನಿಯಂತ್ರಣಕ್ಕೆ ಬಳಸಬಹುದು
ಕೈಗೊಳ್ಳಬೇಕಾದ ನಿಯಮಗಳು: ಪ್ರಮಾಣಿಕೃತ ಕಾನೂನುಬದ್ಧ ಬೀಜ ಖರೀದಿಸುದು, ಸರ್ಕಾರದಿಂದ ಮಾನ್ಯತೆ ಪಡೆದ ಅಂಗಡಿಗಳಿಂದ ಮಾತ್ರ ಬೀಜ ಮತ್ತು ಗೊಬ್ಬರ ಖರೀದಿಸಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸೂಚನೆ ಮುಂದುವರೆಸಿದ್ದಾರೆ.
ಸರ್ಕಾರಿ ಯೋಜನೆಗಳ ಸದುಪಯೋಗ: ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (Pಒಈಃಙ) ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಿದೆ.
ಪರಿಸರ ಸಂರಕ್ಷಣೆ: ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸುವುದು. ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳಿಂದ ತಾಂತ್ರಿಕ ಮಾರ್ಗದರ್ಶನ ಪಡೆಯಿರಿ ಎಂದು ವಿಜ್ಞಾನಿಗಳು ಸೂಚನೆ ನೀಡಿದ್ದಾರೆ.
ತಜ್ಞರ ಸಲಹೆ:
ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು,“ಮಾಗಿ ಉಳಿಮೆ ಮತ್ತು ಮಣ್ಣಿನ ಪರೀಕ್ಷೆಯು ಆಧುನಿಕ ಕೃಷಿಯ ಮೂಲಾಧಾರಗಳಾಗಿವೆ. ರೈತರು ತಾಂತ್ರಿಕತೆಯನ್ನು ಅಳವಡಿಸಿಕೊಂಡು, ಸರ್ಕಾರಿ ಯೋಜನೆಗಳನ್ನು ಬಳಸಿಕೊಂಡರೆ, ಉತ್ಪಾದಕತೆಯ ಜೊತೆಗೆ ಆದಾಯವನ್ನೂ ದ್ವಿಗುಣಗೊಳಿಸಬಹುದು,” ಎಂದು ಸಲಹೆ ನೀಡಿದ್ದಾರೆ.

Comments are closed.

Don`t copy text!