Shubhashaya News

ಮೂತ್ರ ವಿಸರ್ಜನೆಗೆ ಜನರ ಪರದಾಟ

ಚಿತ್ತಾಪುರ: ಪಟ್ಟಣದ ಸಾರ್ವಜನಿಕ ಶೌಚಾಲಯ ಸಮಸ್ಯೆಯಿಂದ ಜನ ಸಾಮಾನ್ಯರು ಕಟ್ಟಡಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದ ಜನಸಂಖ್ಯೆಗೆ ಪೂರಕವಾಗಿ ಪುರಸಭೆ ಅಗತ್ಯ ಸೌಲಭ್ಯ ಒದಗಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಮುಖ್ಯವಾಗಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿದೆ. ಹೀಗಾಗಿ ಜನರು ಸಮಸ್ಯೆ ಎದುರಿಸುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣ, ಪುರಸಭೆ ಕಾರ್ಯಲಯದ ಹಿಂದುಗಡೆ ಮತ್ತು ಜನತಾ ಚೌಕ್ ಬಳಿ ಬಿಟ್ಟರೆ ಉಳಿದ ಕಡೆ ಎಲ್ಲಿಯೂ ಸಾರ್ವಜನಿಕ ಶೌಚಾಲಯಗಳಿಲ್ಲ. ಸದಾ ಜನದಟ್ಟಣೆಯ ಪ್ರದೇಶವಾಗಿರುವ ಲಾಡ್ಜೀಂಗ್ ಕ್ರಾಸ್, ನಾಗಾವಿ ವೃತ್ತ, ಭುವನೇಶ್ವರ ಚೌಕ್, ಅಂಬೇಡ್ಕರ್ ವೃತ್ತ, ತಾಲೂಕು ಪಂಚಾಯಿತಿ, ತಹಶೀಲ್ ಕಾರ್ಯಾಲಯದ ಮಾರ್ಗವಾಗಿ ಪುರಸಭೆಗೆ ತೆರಳುವ ಮಾರ್ಗದಲ್ಲಿ ಎಲ್ಲಿಯೂ ಸಾರ್ವಜನಿಕ ಮೂತ್ರಾಲಯ, ಶೌಚಾಲಯ ಕಾಣಸಿಗುವುದಿಲ್ಲ.
ಪರಿಸರ ಕಾಪಾಡುವ ವಿಷಯಕ್ಕಿಂತ ನಿಸರ್ಗ ಕರೆಯನ್ನು ಪೂರೈಸುವುದೇ ಜನರಿಗೆ ಮುಖ್ಯವಾಗಿರುವುದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಬಯಲನ್ನೆ ಆಶ್ರಯಿಸುವಂತಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರಿಂದ ತೊಂದರೆ ಹೆಚ್ಚಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣದಲ್ಲಿನ ಶೌಚಾಲಯಕ್ಕೆ ಹೋಗಬೇಕು. ಇನ್ನೂ ಕೆಲವರು ಅನಿವಾರ್ಯವಾಗಿ ರಸ್ತೆ ಬದಿಯ ಪೊದೆ, ಪಾಳು ಬಿದ್ದ ಕಟ್ಟಡ ಅಥವಾ ಜಾಲಿ ಮುಳ್ಳು ಕಂಟ್ಟಿಗಳ ಆಶ್ರಯ ಪಡೆದು ಮೂತ್ರ ವಿಸರ್ಜನೆ ಮಾಡುತ್ತಾರೆ. ರಸ್ತೆ ಬದಿಯ ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರು ಕಂಡ ಕಂಡಲ್ಲಿ ಮೂತ್ರ ವಿಸರ್ಜಿಸುವುದರಿಂದ ಇತರರಿಗೂ ಕಾಯಿಲೆ ಹರಡುವ ಆತಂಕ ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಪುರಸಭೆ ವಿರುದ್ಧ ಜನ ಕಿಡಿ ಕಾರುತ್ತಿದ್ದಾರೆ.
ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿರುವಾಗ ಪ್ರಮುಖ ಸ್ಥಳದಲ್ಲಿ ಬೀದಿಗೊಂದು ಶೌಚಾಲಯ ಅಥವಾ ಮೂತ್ರಾಲಯ ಕಟ್ಟುವುದು ಅಷ್ಟೋಂದು ಕಷ್ಟವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಟ್ಟಣದ ಜನರ ಅನುಕೂಲಕ್ಕಾಗಿ ಶೌಚಾಲಯಗಳನ್ನು ಕಟ್ಟಲು ಪುರಸಭೆ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಜನಸಂದಣಿ ಇರುವ ಪ್ರದೇಶದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲ. ಶೌಚಾಲಯ ಇಲ್ಲದ ಕಾರಣ ಹತ್ತಿರದ ಕಟ್ಟಡಗಳ ಮರೆಯಲ್ಲಿ ಇಲ್ಲವೇ ಯಾವುದಾದರೂ ರಸ್ತೆ ಬದಿಯ ಚರಂಡಿಯಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಇದೆ.
-ದೇವಿಂದ್ರ ಪಟ್ಟಣದ ನಿವಾಸಿ.

  • ಎಂ.ಡಿ ಮಶಾಖ

Comments are closed.

Don`t copy text!