
ನನ್ನ ತೇಜೋವಧೆ ಮಾಡಲು ರಾಜಕೀಯ ವಿರೋಧಿಗಳು ನಕಲಿ ಸಿಡಿ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಟಿ ನಡೆಸಿ ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪದ ಕುರಿತು ಮನಬಿಚ್ಚಿ ಮಾತನಾಡಿದ ಅವರು, ಸಿಡಿ ಸಂಪೂರ್ಣವಾಗಿ ನಕಲಿಯಾಗಿದೆ. ನನ್ನ ರಾಜಕೀಯ ಏಳಿಗೆಯನ್ನು ಸಹಿಸದವರು ಈ ರೀತಿಯ ಕೃತ್ಯ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಇವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ.

ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ನಿರಪರಾಧಿಯಾಗಿದ್ದೇನೆ. ಸಿಡಿ ವಿಚಾರದ ಬಗ್ಗೆ ಮೊದಲೇ ಗೊತ್ತಿತ್ತು. ಸಿಡಿ ಬಿಡುಗಡೆಯ 26 ಗಂಟೆ ಮೊದಲೇ ಮಾಹಿತಿ ಬಂದಿತ್ತು ಆದರೆ ನಾನು ತಪ್ಪೇ ಮಾಡಿಲ್ಲ ಎಂದ ಮೇಲೆ ಏಕೆ ಅಂಜಬೇಕು ಎಂದು ಸುಮ್ಮನಿದ್ದೆ. ಆದರೆ, ನಮ್ಮ ಕುಟುಂಬದ ಮರ್ಯಾದೆಗೋಸ್ಕರ ನಾನು ರಾಜೀನಾಮೆ ನೀಡಿದ್ದೇನೆ.
ಕುಟುಂಬಸ್ಥರ ಮತ್ತು ಸಹೋದರ ಬಾಲಚಂದ್ರ ಜಾರಕಿಹೊಳಿ ಸಲಹೆಯಂತೆ ಮುಂದುವರೆಯುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯಾಂಶ ಬಯಲಿಗೆ ಬರಲಿದೆ ಅಲ್ಲಿಯವರೆಗೆ ದಯವಿಟ್ಟು ಎಲ್ಲರೂ ಕಾಯಿರಿ ಎಂದು ಮನವಿ ಮಾಡಿದರು.