ಆಳಂದ: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅರ್ಹ ರೈತರಿಗೆ ಇನ್ನೂ ಬೆಳೆ ವಿಮೆ ಹಣ ಜಮೆಯಾಗದಿರುವುದನ್ನು ಖಂಡಿಸಿ ಹಾಗೂ ಕೂಡಲೇ ವಿಮೆ ಮೊತ್ತ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಿಂಬರ್ಗಾದಲ್ಲಿ ನೂರಾರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ ೨.೩೦ರವರೆಗೆ ನಡೆಯಿತು. ಬೆಳೆ ವಿಮೆ ಹಣಕ್ಕಾಗಿ ಹಲವು ತಿಂಗಳುಗಳಿAದ ಕಾಯುತ್ತಿರುವ ರೈತರ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಅರ್ಹ ಎಲ್ಲ ರೈತರ ಖಾತೆಗಳಿಗೆ ಯಾವುದೇ ವಿಳಂಬವಿಲ್ಲದೆ ವಿಮೆ ಮೊತ್ತ ಜಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಬದಲು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ರೈತರು ನಿರ್ಧರಿಸಿದರು. ಬಳಿಕ ಉಪ ತಹಶೀಲ್ದಾರ್ ಆರ್. ಮಹೇಶ್, ಸ್ಥಳೀಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ತಾಲ್ಲೂಕು ಕೃಷಿ ಅಧಿಕಾರಿ ಸರೋಜಿನಿ ಅವರಿಗೆ ಮನವಿ ಸಲ್ಲಿಸಲಾಯಿತು. ೧೫–೨೦ ದಿನಗಳಲ್ಲಿ ಹಣ ಜಮೆ: ಅಧಿಕಾರಿಗಳ ಭರವಸೆ ರೈತರ ಮನವಿ ಸ್ವೀಕರಿಸಿದ ಅಧಿಕಾರಿಗಳು, ಬೆಳೆ ವಿಮೆ ಹಣ ಜಮೆ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನೂ ೧೫ರಿಂದ ೨೦ ದಿನಗಳೊಳಗಾಗಿ ಅರ್ಹ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಭರವಸೆ ನೀಡಿದರು. ಆದರೆ, ಅಧಿಕಾರಿಗಳ ಭರವಸೆಯಿಂದ ಪ್ರತಿಭಟನಾಕಾರರು ಸಂಪೂರ್ಣ ತೃಪ್ತರಾಗದೆ, ನಿಗದಿತ ಅವಧಿಯಲ್ಲಿ ಹಣ ಜಮೆಯಾಗದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ರೈತರ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದರು.
ಗದಗೇಶ್ವರ ಮಠದ ನಿಂಬರ್ಗಾದ ಶ್ರೀ ನೀಲಕಂಠ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಕ.ರ.ವೇ ನಿಂಬರ್ಗಾ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ, ಕರ್ನಾಟಕ ರಾಜ್ಯ ರೈತ ಸಂಘ ನಿಂಬರ್ಗಾ ಅಧ್ಯಕ್ಷ ಧರ್ಮರಾಯ ಕಾಮಣಗೊಳ, ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಮಲ್ಲಿನಾಥ ಗುಗೊಂಡ ಸೇರಿದಂತೆ ಹಲವರು ಭಾಗವಹಿಸಿದ್ದರು. ರೈತರ ಆಕ್ರೋಶ ಬೆಳೆ ನಷ್ಟದಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೆಳೆ ವಿಮೆ ಹಣವೂ ಸಮಯಕ್ಕೆ ದೊರೆಯದಿರುವುದು ಮತ್ತಷ್ಟು ಸಂಕಷ್ಟ ತಂದಿದೆ. ವಿಮೆ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ಹಾಗೂ ಹಣ ಜಮೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹಿಂದ್ರ ನಿರ್ಮಲ್ಕರ, ಶ್ರೀಮಂತ ವಗ್ದರ್ಗಿ, ಉಮಾಕಾಂತ ತೋಟಪಗೊಳ, ಅಮೃತ ಬಿಬ್ರಾಣಿ, ಸೂರ್ಯಕಾಂತ ಕಂಟೇಕುರ, ಭಾಗಣ್ಣ ದುಗೊಂಡ, ಸಂಗಣ್ಣ ಗವಣಗೊಳ, ಸಿದ್ದಾರಾಮ ಅಷ್ಟಗಿ, ಮೇಘರಾಜ, ಪ್ರಭು ಬಿಬ್ರಾಣಿ, ಉಮೇಶ್ ವಗ್ದರ್ಗಿ, ಅರವಿಂದ ಬಣಗಾರ, ಶಂಕರ ನಾಗೂರ, ಗುರು ಕಾಮಣಗೊಳ, ಸಾತಣ್ಣ ಮಂಟಗಿ, ಮಹೇಶ್ ಗವಣಗೊಳ, ದಿಗಂಬರ ಕುಲಕರ್ಣಿ, ಸಿದ್ದಾರಾಮ ನಿಗಶೆಟ್ಟಿ, ಶಿವಶರಣ ವಗ್ದರ್ಗಿ, ಧರ್ಮರಾಯ ಹೊಸಮನಿ, ಬೊಮ್ಮನಳ್ಳಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.