Shubhashaya News

ಕೋರೋನಾ ನಿಯಂತ್ರಣಕ್ಕೆ ಶಾಸಕ ಗುತ್ತೇದಾರ ನೇತೃತ್ವದಲ್ಲಿ ಸಭೆ

ಆಳಂದ ತಹಸೀಲ ಕಾರ್ಯಲಯದಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ನೇತೃತ್ವದಲ್ಲಿ ಕೋರೋನಾ ಸ್ಥಿತಿಗತಿ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ಜರುಗಿತು.
ದಿನೇ ದಿನೇ ಅಪಾಯದ ಮಟ್ಟ ಮಿರುತ್ತಿರುವ ಕೋರೋನಾ ವೈರಸ್ ನಿಯಂತ್ರಣಕ್ಕೆ ತರಲು ಹಾಗೂ ಸಾವಿನ ಪ್ರಮಾಣ ತಗ್ಗಿಸಿ ಸೋಂಕಿತರ ಸೂಕ್ತ ಚಿಕಿತ್ಸೆಗೆ ಅಧಿಕಾರಿಗಳು ಹಗಲಿರುಳು ಶ್ರಮಿಸಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಧಿಕಾರಿಗಳಿಗೆ ಸೂಚಿಸಿದರು.
ಬುಧುವಾರ ಆಳಂದ ತಹಸೀಲ ಕಾರ್ಯಾಲಯದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಜೊತೆ ಕೋರೋನಾ ವೈರಸ್ ಸ್ಥಿತಿಗತಿ ಕುರಿತು ಸಮಾಲೋಚಿಸಿ ಸಮರೋಪಾದಿಯಲ್ಲಿ ಚಿಕಿತ್ಸೆಗೆ ಮುಂಜಾಗೃತಾ ಕ್ರಮ ವಹಿಸಬೇಕು ಎಂದು ತಿಳಿಸಿದರು.
ವೈರಸ್ ಆಳಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕವಾಗಿ ಹಬ್ಬಿದೆ ಅದನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ನಿಯೋಜಿಸಲಾಗಿದೆ ಸಂಬಂಧಪಟ್ಟ ಅಧಿಕಾರಿಗಳು ತಮಗೆ ನಿಯೋಜಿಸಿದ ಸ್ಥಳದಲ್ಲಿ ಇದ್ದು ಸೋಂಕು ಹರಡುವುದನ್ನು ತಡೆಯಲು ಯತ್ನಿಸಬೇಕು. ತಾಲೂಕಾ ಆಸ್ಪತ್ರೆಯ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 20 ಬೆಡ್ ವ್ಯವಸ್ಥೆ ಮಾಡಿ ಆಕ್ಸಿಜನ್ ಪೊರೈಸಲು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಸಹ ಸಮರ್ಪಕವಾಗಿ ಸ್ವಂದಿಸಿದ್ದು ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಮದುವೆ ಸಮಾರಂಭ, ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಮೊದಲಿನಂತೆ ಜನರು ಹೆಚ್ಚು ಹೆಚ್ಚು ಸೇರುತ್ತಿದ್ದಾರೆ ಇದರಿಂದ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ ಎನ್ನುವುದು ವೈದ್ಯಕೀಯ ವರದಿಗಳಿಂದ ದೃಢಪಡುತ್ತಿದೆ ಹೀಗಾಗಿ ಅಧಿಕಾರಿಗಳು ಜನ ಸೇರುವುದನ್ನು ತಪ್ಪಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ರೋಗದ ಲಕ್ಷಣಗಳು ಇದ್ದರೂ ಕೂಡ ಜನತೆ ಪರೀಕ್ಷೆಗೆ ಮುಂದೆ ಬರುತ್ತಿಲ್ಲ ಹೀಗಾಗಿ ಕಿಟ್ ಕೊಡುವುದರ ಮೂಲಕ ಪ್ರತಿ ಮನೆಗೆ ಹೋಗಿ ಪರೀಕ್ಷೆ ಮಾಡಲು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ವ್ಯಾಕ್ಸಿನ್ ಪಡೆಯಲು ಎಲ್ಲರು ಮುಂದೆ ಬರಬೇಕು ವ್ಯಾಕ್ಸಿನ್ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ ಜನತೆ ಸ್ವಯಂ ಪ್ರೇರಿತರಾಗಿ ಮುಂದೆ ಲಸಿಕೆ ಪಡೆಯಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.
ಪಟ್ಟಣ ಪ್ರದೇಶದಲ್ಲಿ ನಾಲ್ಕು ವಾರ್ಡಗೆ ಒಬ್ಬರಂತೆ ಒಬ್ಬ ಅಧಿಕಾರಿಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕು ಪಂಚಾಯತಿಗೆ ಒಬ್ಬರಂತೆ ನೋಡಲ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಅವರೆಲ್ಲರೂ ಕೇಂದ್ರಸ್ಥಾನದಲ್ಲಿದ್ದುಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು. ಗ್ರಾಮ ಪಂಚಾಯತ ಮಟ್ಟದಲ್ಲಿ ಟಾಸ್ಕಫೋರ್ಸ ರಚಿಸಲಾಗಿದೆ ಅದರ ಸದಸ್ಯರು ಕಾರ್ಯಪ್ರವೃತ್ತರಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ, ತಹಸೀಲ್ದಾರ ಯಲ್ಲಪ್ಪ ಸುಭೇದಾರ, ತಾಲೂಕಾ ವೈದ್ಯಾಧಿಕಾರಿ ಅಭಯಕುಮಾರ, ವೈದ್ಯ ಚಂದ್ರಕಾಂತ, ಕೃಷಿ ಇಲಾಖೆಯ ಅಧಿಕಾರಿ, ಸಿಪಿಐ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Leave A Reply

Your email address will not be published.