ಚಿತ್ತಾಪುರ: ಪಟ್ಟಣದಲ್ಲಿ ಸೇಡಂನ ಸಹಾಯಕ ಆಯುಕ್ತ ರಮೇಶ ಕೋಲಾರ್ ಮತ್ತವರ ತಂಡ ನಿಯಮ ಬಾಹಿರವಾಗಿ ತೆರದ ಅಂಗಡಿಗಳನ್ನು ಮುಚ್ಚಿಸುತ್ತಿರುವುದು.
ಚಿತ್ತಾಪುರ: ಪಟ್ಟಣದಲ್ಲಿ ಸೇಡಂನ ಸಹಾಯಕ ಆಯುಕ್ತ ರಮೇಶ ಕೋಲಾರ್ ಮತ್ತವರ ತಂಡ ಶುಕ್ರವಾರ ಮಧ್ಯಾಹ್ನ ಲಾಠಿ ಹಿಡಿದು ಬೀದಿಗಿಳಿದು ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದರು.
ಈ ವೇಳೆ ಸಾಮಾಜಿಕ ಅಂತರ ಕಾಯದೆ, ನಿಯಮ ಬಾಹಿರವಾಗಿ ಹೋಟೆಲ್, ಪಾನ್ಶಾಪ್ ಸೇರಿ ಇನ್ನಿತರ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಅಂಗಡಿಗಳಿಗೆ ಹೋಗಿ ಕೂಡಲೇ ಬಂದ್ ಮಾಡಿ ಎಂದು ಎಚ್ಚರಿಕೆ ನೀಡಿದರು. ನಾನು ಹೋದ ಬಳಿಕ ಮತ್ತೋಮ್ಮೆ ತೆರೆದರೆ ಕೂಡಲೇ ಅಂಗಡಿ ಸೀಜ್ ಮಾಡಿ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರನ್ನು ಸೂಚಿಸಿದರು. ಇದೇ ವೆಳೆ ಲಾಠಿ ಹಿಡಿದು ರಸ್ತೆ ಮಧ್ಯೆ ಹಾಗೂ ಕಿರಾಣಿ ಅಂಗಡಿ ಮುಂಗ್ಗಟ್ಟುಗಳ ಹತ್ತಿರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರನ್ನು ಕೂಡಲೇ ಸ್ಥಳದಿಂದ ಹೋಗಲು ಸೂಚಿಸಿದರು.
ಹೀಗೆ ಪಟ್ಟಣದ ಭುವನೇಶ್ವರಿ ವೃತದಿಂದ ನಾಗಾವಿ ವೃತ್ತದ ವರೆಗೆ ಸಂಚರಿಸಿದ ಸಹಾಯಕ ಆಯುಕ್ತ ಪಟ್ಟಣದ ಅಗತ್ಯ ವಸ್ತು ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.
ಇದೇ ವೆಳೆ ಪಟ್ಟಣದ ನಾಗಾವಿ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಕೋವಿಡ್ ಕೇರ್ ಕೇಂದ್ರ ಪ್ರಾರಂಭಿಸುವ ಕುರಿತು ಪೂರ್ವ ಸಿದ್ಧತೆಯನ್ನು ಪರೀಶಿಲಿಸಿದರು.
ನಂತರ ಮಾತನಾಡಿದ ಅವರು, ಕೊರೊನಾ ತಡೆಗಟ್ಟಲು ಹಾಗೂ ಕೊರೊನಾ ಮುಕ್ತ ಪ್ರದೇಶವನ್ನಾಗಿ ಮಾಡಲು ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು, ಸಾಬೂನಿನಿಂದ ಕೈತೋಳೆದುಕೊಳ್ಳಬೇಕು. ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡಾಗ ಮಾತ್ರ ಕೊರೊನಾ ಸೋಂಕು ತಗಲುವುದಿಲ್ಲ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಜನಸಾಮಾನ್ಯರಿಗೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟುಗಳು ಮುಂದಿನ ಮೇ.4ರ ವರೆಗೆ ನಡೆಯುವುದಿಲ್ಲ. ಒಂದು ವೇಳೆ ನಿಯಮ ಬಾಹಿರವಾಗಿ ಅಂಗಡಿಗಳನ್ನು ತೆರೆದರೆ ಅಂತಹ ಅಂಗಡಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ, ಶನಿವಾರ ಮತ್ತು ರವಿವಾರ ವಾರದ ಎರಡು ದಿನಗಳು ಸಂಪೂರ್ಣ ಕಫ್ರ್ಯೂ ಜಾರಿಯಲ್ಲಿದ್ದು, ಅವಶ್ಯಕ ಸಾಮಾಗ್ರಿ ಖರೀದಿಸಲು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ಇದೆ. ನಂತರ ಆಸ್ಪತ್ರೆ, ಔಷಧಿ ಅಂಗಂಡಿಗಳು ಬಿಟ್ಟು ಯಾವುದೆ ಅಂಗಡಿ ಮುಂಗಟ್ಟುಗಳು ತೆರೆಯದೇ ಸಂಪೂರ್ಣ ಬಂದ್ ಮಾಡಬೇಕು ಎಂದು ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
Next Post
Comments are closed.