ನಿಂಬರ್ಗಾ ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಂಜಾರಾ ಕ್ರಾಂತಿ ದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಡ ತಹಸೀಲದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಿಂಬರ್ಗಾ ಗ್ರಾಮದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿದ್ದು ಇದರ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್ ಗುತ್ತೇದಾರ ಆರೋಪಿಸಿದರು.
ಮಂಗಳವಾರ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಬಂಜಾರಾ ಕ್ರಾಂತಿ ದಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮದ ವಾರ್ಡ ನಂ.1ರ ಮೌಲಾ ನಗರದ ಚರಂಡಿ ಸಮಸ್ಯೆ, ನಿಂಬರ್ಗಾ ತಾಂಡಾದಿಂದ ಬಸವಂತವಾಡಿ ರಸ್ತೆ ಸಂಪರ್ಕ, ಬಿಸಿಎಮ್ ವಸತಿ ನಿಲಯಕ್ಕೆ ಹೋಗಲು ರಸ್ತೆ, ನಾಡ ಕಚೇರಿ ಕಟ್ಟಡ ನಿರ್ಮಾಣ, ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪರಿಹಾರ, ನಿಂಬರ್ಗಾ ಗ್ರಾಮದಿಂದ ಮಾಡಿಯಾಳ ಗ್ರಾಮದವರೆಗೆ ಮಾಡುತ್ತಿರುವ ರಸ್ತೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ, ನಿಂಬರ್ಗಾದಿಂದ ವೈಜಾಪೂರವರೆಗೆ ರಸ್ತೆ ಹಾಗೂ ಬಸ್ ಸಂಪರ್ಕ ಕಲ್ಪಿಸುವುದು, ನಿಂಬರ್ಗಾ ತಾಂಡಾಕ್ಕೆ ಬಸ್ಸಿನ ಸೌಕರ್ಯ ಹಾಗೂ ನಿಂಬರ್ಗಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 60 ಲಕ್ಷ. ರೂ. ವೆಚ್ಚದಲ್ಲಿ ಕಳಪೆ ಸಿಸಿ ರಸ್ತೆ ನಿರ್ಮಿಸುತ್ತಿರುವ ಕುರಿತು ದೂರು ನೀಡಲಾಯಿತು. ಈ ಬೇಡಿಕೆಗಳನ್ನು ಆದ್ಯತೆಯ ಮೇಲೆ ಬಗೆಹರಿಸದಿದ್ದರೆ ನಾಗರಿಕರೊಂದಿಗೆ ತಹಸೀಲ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಂಜಾರಾ ಕ್ರಾಂತಿ ದಳ ರಾಜ್ಯ ಅಧ್ಯಕ್ಷ ರಾಜಕುಮಾರ ಚವ್ಹಾಣ, ಆಳಂದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಸಂತೋಷ ಹಾದಿಮನಿ, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ಶರಣು ಸರಸಂಬಿ, ಗುರು ಪಾಟೀಲ, ವೈಜನಾಥ ಪಾಟೀಲ, ಲಕ್ಷ್ಮೀಕಾಂತ ಸೇರಿದಂತೆ ನಿಂಬರ್ಗಾ ವಲಯದ ಅನೇಕ ಮುಖಂಡರು ಭಾಗವಹಿಸಿದ್ದರು.
Comments are closed.