Shubhashaya News

ರುದ್ರವಾಡಿ: ಬಸವೇಶ್ವರ ಪ್ರತಿಮೆ ಪುನ: ಪ್ರತಿಷ್ಠಾಪಿಸಲು ಒಕ್ಕೊರಲ ಆಗ್ರಹ

ರುದ್ರವಾಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆ ಪುನ:ಪ್ರತಿಷ್ಠಾಪಿಸಲು ಆಗ್ರಹಿಸಿ ಗ್ರಾಮಸ್ಥರು ಆಳಂದ ತಹಸೀಲದಾರಿಗೆ ಮನವಿ ಸಲ್ಲಿಸಿದರು.

ರುದ್ರವಾಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆಯನ್ನು ಪುನ:ಪ್ರತಿಷ್ಠಾಪಿಸಿ ವಿವಾದ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಗ್ರಾಮಸ್ಥರು ತಹಸೀಲದಾರರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಆಳಂದ ಪಟ್ಟಣದ ಹೊರವಲಯದ ತಹಸೀಲ ಕಚೇರಿಯ ಮುಂಭಾಗ ಸೇರಿದ ರುದ್ರವಾಡಿ ಗ್ರಾಮಸ್ಥರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ದಿ. 11ನೇ ಆಗಷ್ಟ್ 2025ರಂದು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಆದರೆ ಕೆಲವು ಮತೀಯ ಶಕ್ತಿಗಳು ಗ್ರಾಮದಲ್ಲಿ ಸೌಹಾರ್ದ ವಾತಾವರಣ ಕೆಡಿಸಲು ಈ ಜಾಗಕ್ಕೆ ತಕರಾರು ತೆಗೆದು ಇದು ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ ಜಾಗವೆಂದು ಆಕ್ಷೇಪಣೆ ಸಲ್ಲಿಸಿ ಪ್ರತಿಮೆಯನ್ನು ತೆಗೆಯಲು ಅರ್ಜಿ ಸಲ್ಲಿಸಿರುತ್ತಾರೆ ಎಂದು ದೂರಿದರು.

ಸದರಿ ವಿಷಯದ ಕುರಿತು ತಹಸೀಲದಾರರು ಗ್ರಾಮಕ್ಕೆ ಆಗಮಿಸಿ ಎಲ್ಲ ಸಮುದಾಯದವರ ಜೊತೆ ಮಾತುಕತೆ ನಡೆಸಿ ಸದರಿ ಜಾಗವನ್ನು ತಹಸೀಲ ಕಚೇರಿಯಿಂದ ಸರ್ವೇ ಮಾಡಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿ ಹೋಗಿರುತ್ತಾರೆ ಎಂದು ಮಾಹಿತಿ ನೀಡಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ದಿ. 14ನೇ ಆಗಷ್ಟ್ 2025ರ ಗುರುವಾರದಂದು ತಾಲೂಕು ಸರ್ವೇಯರ್ ಅಕ್ಷಯ, ಕಂದಾಯ ನಿರೀಕ್ಷಕ ಅಲ್ಲಾವುದ್ದೀನ್ ಅವರು ಬೆಳಿಗ್ಗೆ 11 ಗಂಟೆಗೆ ಬಂದು ಎಲ್ಲ ಸಮುದಾಯದ ಮುಖಂಡರೊಂದಿಗೆ ಶಾಲೆಯ ಕೋಣೆಯಲ್ಲಿ ಕುಳಿತು ಚರ್ಚಿಸಿದಾಗ ತಾಲೂಕು ಸರ್ವೇಯರ್ ಅವರು ಸರ್ವೇ ಜಾಗದಲ್ಲಿ ಕಟ್ಟಡ ಇರುವುದರಿಂದ ಸಾಕಳಿ( ಚೈನ್) ಮುಖಾಂತರ ಸರ್ವೇ ಮಾಡಲು ಬರುವುದಿಲ್ಲ, ಎಂದು ಇನ್ನೊಂದು ವಿಧಾನ ಇರುತ್ತದೆ ಎಂದಾಗ ಮಶೀನ್ ಮುಖಾಂತರ ಸರ್ವೇ ಮಾಡಲು ಬರುತ್ತದೆ ಎಂದು ಹೇಳಿ ಅದಕ್ಕಾಗಿ ಒಂದು ವಾರ ಕಾಲಾವಕಾಶ ಬೇಕು ಎಂದು ಕೇಳಿದಾಗ ಅದಕ್ಕೆ ಎಲ್ಲ ಸಮುದಾಯದವರು ಅವರ ಮಾತಿಗೆ ಒಪ್ಪಿಗೆ ಸೂಚಿಸಿರುತ್ತಾರೆ ಎಂದು ಹೇಳಿದರು.

ನಂತರ ಅದೇ ದಿನ ಸಾಯಂಕಾಲ 5 ಗಂಟೆಗೆ ತಹಸೀಲದಾರರಾದ ತಾವು ಮತ್ತು ಸರ್ಕಲ್ ಇನ್ಸ್‍ಪೆಕ್ಟರ್ ಅವರು ಯಾರಿಗೂ ತಿಳಿಸದೇ ಏಕಾಏಕಿ ಗ್ರಾಮಕ್ಕೆ ಬಂದು ಪ್ರತಿಮೆಯನ್ನು ತೆರವುಗೊಳಿಸಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇಟ್ಟಿರುತ್ತೀರಿ. ಇದು ಮಾನ್ಯ ತಹಸೀಲದಾರರಾದ ತಾವು ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಅವರು ಎಲ್ಲ ಸಮುದಾಯದ ಜನರಿಗೆ ಮಾಡಿದ ದ್ರೋಹವಾಗಿರುತ್ತದೆ. ಆದ್ದರಿಂದ ರುದ್ರವಾಡಿ ಗ್ರಾಮಸ್ಥರಾದ ನಾವು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ಸದರಿ ಜಾಗದ ಸರ್ವೇ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೆ ಬಸವೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಯಥಾಸ್ಥಿತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್ ಗುತ್ತೇದಾರ, ಚಿದಾನಂದ ಶೀಲು, ವಿಜಯಾನಂದ ಘಂಟೆ, ಶಿವಪ್ರಕಾಶ ಹೀರಾ, ಶ್ರೀನಾಥ ಮೂಲಗೆ, ಶರಣಗೌಡ ಪಾಟೀಲ ದೇವಂತಗಿ, ಮಹೇಶ ಗೌಳಿ, ಲಿಂಗರಾಜ ಪಾಟೀಲ, ಬಾಬಾಸಾಹೇಬ್ ಪಾಟೀಲ, ಶಿವಪುತ್ರ ನಡಗೇರಿ, ಮಹೇಶ ಕೋರಳ್ಳಿ, ಬಸವರಾಜ ಹತ್ತರಕಿ, ಶ್ರೀಶೈಲ ಖಜೂರೆ, ಧರ್ಮಣ್ಣಾ ಹಣಮಶೆಟ್ಟಿ, ಸುರೇಶ ಡಿಗ್ಗಿ, ಅಣ್ಣಪ್ಪ ಚಿಚಕೋಟಿ, ವಿಜಯಾನಂದ ಕೊಟ್ಟರಗಿ, ಶರಣು ಮೂಲಗೆ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ನೂರಾರು ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

Comments are closed.

Don`t copy text!