Shubhashaya News

ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ

ಸಮಗ್ರ ತನಿಖೆಗೆ ಆಗ್ರಹಿಸಿ ಜನಪರ ಸಂಘಟನೆಗಳಿಂದ ಪ್ರತಿಭಟನೆ

ಳಂದ: ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ  ಸಂಘಟನೆಯ ಪ್ರಮುಖ ಡಾ. ಮೀನಾಕ್ಷಿ ಬಾಳಿ, ಕೆ. ನೀಲಾ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

 

ಆಳಂದ: ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ), ಮುಂದೆ ಜನವಾದಿ ಮಹಿಳಾ ಸಂಘಟನೆ, ಎಸ್‍ಎಫ್‍ಐ, ಡಿವೈಎಫ್‍ಐ, ಮತ್ತು ದಲಿತ ಹಕ್ಕುಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಬುಧವಾರ ತೀವ್ರ ಪ್ರತಿಭಟನೆ ನಡೆಯಿತು.

ಒಡಿಶಾ ಮೂಲದ ಬಿಎಸ್‍ಸಿ ಭೂಗರ್ಭವಿಜ್ಞಾನ ವಿದ್ಯಾರ್ಥಿನಿ ಜಯಶ್ರೀ ನಾಯಕ್ (21) ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಖಂಡಿಸಿ, ಈ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಈ ಹೋರಾಟ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ್ತಿ ಕೆ. ನೀಲಾ, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ತೊಂದರೆಗಳಿದ್ದರೂ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. “ಈ ಹಿಂದೆಯೂ ಒಬ್ಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದರೆ, ಜಯಶ್ರೀಯ ಈ ದುರಂತ ತಪ್ಪುತ್ತಿತ್ತು,” ಎಂದು ಅವರು ಹೇಳಿದರು. ಕುಲಪತಿಗಳು ಆರ್‍ಎಸ್‍ಎಸ್ ಮತ್ತು ಬಜರಂಗ ದಳದ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ, ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೋಮುವಾದಿ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಡಿವೈಎಫ್‍ಐ ರಾಜ್ಯಾಧ್ಯಕ್ಷ ಲವಿತ್ರ ವಿ, ವಿದ್ಯಾರ್ಥಿಗಳಿಗೆ ಮಾತನಾಡುವ ಸ್ವಾತಂತ್ರ್ಯವಿಲ್ಲದಿರುವುದು ಮತ್ತು ಶಿಕ್ಷಕರು ಸಮಸ್ಯೆಗಳಿಗೆ ಕಿವಿಗೊಡದಿರುವುದನ್ನು ಟೀಕಿಸಿದರು. ಡಾ. ಮೀನಾಕ್ಷಿ ಬಾಳಿ, “ಜಯಶ್ರೀ ತನ್ನ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಬಸವರಾಜ ಕೂಬಕಡ್ಡಿ ಅವರಿಗೆ ತಿಳಿಸಿದ್ದರೂ, ಅವರು ಕೇಳದಿರುವುದು ಶಿಕ್ಷಕ ವೃಂದಕ್ಕೆ ಅವಮಾನಕರ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಹೋರಾಟಗಾರರು ಕುಲಪತಿಗಳಿಗೆ ಮನವಿ ಸಲ್ಲಿಸಲು ಯತ್ನಿಸಿದಾಗ, ಕುಲಪತಿಗಳು ಸಭೆಯಲ್ಲಿದ್ದಾರೆ ಎಂದು ಪೆÇಲೀಸರು ತಿಳಿಸಿದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಮುಖ್ಯ ಗೇಟ್ ಬಂದ್ ಮಾಡಿ, ಕುಲಪತಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲವು ಕಿಡಿಗೇಡಿ ವ್ಯಕ್ತಿಗಳು ಶಾಂತಿಯುತ ಪ್ರತಿಭಟನೆಯನ್ನು ಕೆಡಿಸಲು ಯತ್ನಿಸಿದಾಗ, ಪೆÇಲೀಸರು ಮಧ್ಯಸ್ಥಿಕೆ ವಹಿಸಿ ಅವರನ್ನು ತೆರವುಗೊಳಿಸಿದರು.

ನಂತರ, ಸಿಯುಕೆ ರಿಜಿಸ್ಟ್ರಾರ್ ಪ್ರೊ. ಆರ್.ಆರ್ ಬಿರಾದಾರ್ ಮನವಿ ಸ್ವೀಕರಿಸಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವ ಭರವಸೆ ನೀಡಿದರು. ಆದರೆ, ಹಿಂದಿನ ಲೈಂಗಿಕ ದೌರ್ಜನ್ಯ ದೂರನ್ನು ಮುಚ್ಚಿಹಾಕಿದ್ದು ಮತ್ತು ಕೋಮುವಾದಿ ಪ್ರಚಾರಕ್ಕೆ ಅವಕಾಶ ನೀಡಿದ್ದಕ್ಕೆ ಕಾರಣವೇನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದಾಗ, ರಿಜಿಸ್ಟ್ರಾರ್ ತಾವು ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಕೋಮು ಭಾವನೆಗಳನ್ನು ಪ್ರಚೋದಿಸುವ ಮಾಧ್ಯಮ ವರದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ, ಪದ್ಮಿನಿ ಕಿರಣಗಿ, ಲವಿತ್ರ ವಸ್ತ್ರದ, ಸುಜಾತ ವೈ, ಸರ್ವೇಶ್ ಮಾವಿನಕರ, ಬಂಡಾಯ ಸಾಹಿತಿ ಡಾ. ಪ್ರಭು ಖಾನಾಪುರೆ, ಸಲ್ಮಾನ್ ದೇವಂತಗಿ, ಪ್ರಮೋದ ಪಾಂಚಾಳ, ವಿಜಯಲಕ್ಷ್ಮಿ ಗಡ್ಡೆ, ಚಂದಮ್ಮ ಗೋಳಾ, ಮಾರುತಿ ಗೋಖಲೆ, ಕಾ. ಮಹೇಶ ರಾಠೋಡ, ಮೌಲಾ ಮುಲ್ಲ, ಜನಾರ್ಧನ್ ಮತ್ತಿತರರು ಭಾಗವಹಿಸಿದ್ದರು. ಪೆÇಲೀಸ್ ಬೀಗಿಬಂದೋಬಸ್ತ್ ಒದಗಿಸಲಾಗಿತು.

Comments are closed.

Don`t copy text!