ಚಿತ್ತಾಪುರ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಕೋವಿಡ್-19 ಹಾಗೂ ಕುಡಿಯುವ ನೀರು ವಿಶೇಷ ಸಭೆ ನಡೆಯಿತು.
ಚಿತ್ತಪುರ: ಮಹಾರಾಷ್ಟ್ರ ಹಾಗೂ ಆಂದ್ರ ಸೇರಿದಂತೆ ನಾನಾ ಭಾಗಗಳಿಂದ ರೈಲ್ವೆ ಮೂಲಕ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೋನಾ (ಆರ್ಟಿಪಿಸಿಆರ್) ಟೆಸ್ಟ್ ಮಾಡಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಕೋವಿಡ್-19 ಹಾಗೂ ಕುಡಿಯುವ ನೀರು ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮಾಡಿದರೆ ಕಾರ್ಮಿಕರು ವಲಸೆ ಬರುವ ಸಾಧ್ಯತೆ ಹೆಚ್ಚಾಗಿದೆ. ಮೊದಲ ಕೊರೊನಾ ಅಲೆಯಲ್ಲಿ ಬಹಳಷ್ಟು ಕಾರ್ಮಿಕರು ವಲಸೆ ಬಂದಿದ್ದರು. ಇದೀಗ ಎರಡನೇ ಕೊರೊನಾ ಅಲೆ ಶುರುವಾಗಿದೆ. ಹೀಗಾಗಿ ಅನ್ಯ ರಾಜ್ಯಗಳಿಂದ ರೈಲ್ವೆಯಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ (ಆರ್ಟಿಪಿಸಿಆರ್) ಟೆಸ್ಟ್ ಮಾಡಿಸಿ ಎಂದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ದೀಪಕ್ ಪಾಟೀಲ್ ಅವರು ಕೊರೊನಾ ಬಗ್ಗೆ ಮಾಹಿತಿ ನೀಡುವಾಗ ಚಿತ್ತಾಪುರ ತಾಲೂಕಿನಲ್ಲಿ 149 ಆಕ್ಟೀವ್ ಕೇಸ್ಗಳಿವೆ ಎಂದಾಗ, ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೊರೊನಾ ಆಕ್ಟೀವ್ ಕೇಸ್ ಬಗ್ಗೆ ಸರ್ಕಾರದ ಪರಿಹಾರ ಪೋರ್ಟಲ್ನಲ್ಲಿ ಪ್ರಕಟಿಸುವ ಮಾಹಿತಿಗೂ ಹಾಗೂ ಮಾಧ್ಯಮ ಪ್ರಕಟಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ನೀವು ಕೊಡುವ ಮಾಹಿತಿ ಪರಿಹಾರ ಪೊರ್ಟಲ್ ಮಾಹಿತಿನಾ? ಅಥವಾ ಮಾಧ್ಯಮ ನೀಡುವ ಮಾಹಿತಿನಾ? ಆರೋಗ್ಯ ಇಲಾಖೆ ಈ ರೀತಿ ಎರಡೆರಡು ಪ್ರಕಟಣೆ ನೀಡಿದರೆ ಇದರಲ್ಲಿ ಯಾವುದು ಸತ್ಯವೆಂದು ತಿಳಿಯಬೇಕು. ಕೊರೊನಾ ವಿಷಯದಲ್ಲೂ ರಾಮನ ಲೆಕ್ಕ ಕೃಷ್ಣನ ಲೆಕ್ಕ ಮಾಡಿದರೆ ಹೇಗೆ? ನಮ್ಮ ತಾಲೂಕಿನಲ್ಲಿ ನಿಜವಾದ ಆಕ್ಟೀವ್ ಕೇಸ್ ಎಷ್ಟಿವೆ ಎಂದು ಗೊತ್ತಾದರೆ ಕೋವಿಡ್ ಕೇರ್ ಸೆಂಟರ್ ತೆಗೆಯುವುದಾಗಲಿ, ಕೆಲವು ಮುಜಾಂಗ್ರತಾ ಕ್ರಮಗಳ ತೆಗೆದುಕೊಳ್ಳುವುದಕ್ಕಾಗಲಿ ತುಂಬಾ ಅನುಕೂಲವಾಗುತ್ತದೆ. ತಪ್ಪಾದ ಮಾಹಿತಿ ನೀಡಿದರೆ ನಾವು ಪೂರ್ವ ಸಿದ್ಧತೆ ಮಾಡಿಕೊಳ್ಳುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಲಸಿಕೆ ತೆಗೆದುಕೊಳ್ಳಲು ಎಷ್ಟು ಜನ ನೋಂದಣಿ ಮಾಡಿಸಿದ್ದಾರೆ? ಅದರಲ್ಲಿ ಎಷ್ಟು ಜನರಿಗೆ ಲಸಿಕೆ ನೀಡಿದ್ದಿರಿ? ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದಾಗ ಅದರ ಮಾಹಿತಿ ನನ್ನ ಹತ್ತಿರ ಇಲ್ಲ. ಇಲ್ಲಿವರೆಗೆ ಲಸಿಕೆ ನೀಡಿದ್ದು ಮಾತ್ರ ಇದೆ ಎಂದು ಉತ್ತರಿಸಿದ ಕೂಡಲೇ ಕೋಪಗೊಂಡ ಶಾಸಕರು, ಸಭೆ ಎಂದ ಮೇಲೆ ಮಾಹಿತಿ ತರಬೇಕು ಎಂದು ಗೊತ್ತಿಲ್ವಾ? ಸಭೆ ಎಂದರೇ ಉಡಾಫೆ ಅಂತ ತಿಳ್ಕೋಂಡ್ರಿ ಏನೂ ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರ್ಕಾರ ಲಸಿಕಾ ಉತ್ಸವ ಮಾಡುತ್ತಿದ್ದೇವೆ ಎನ್ನುತ್ತಾರೆ ನೋಂದಣಿ ಮಾಹಿತಿ ಇಲ್ಲದೆ ಯಾರಿಗೆ ಅಂತ ಲಸಿಕೆ ನೀಡ್ತಿರಿ? ಮಾಹಿತಿ ಇಲ್ಲದೆ ಉತ್ಸವ ಮಾಡ್ತಿರಾ? ಇದೆಲ್ಲ ಜನರಿಗೆ ಮರಳು ಮಾಡುವ ತಂತ್ರವಾಗಿದೆ ಎಂದರು.
ಆರೋಗ್ಯ ಇಲಾಖೆಗೆ ಯಾವುದೇ ಬೇಡಿಕೆ ಸಲ್ಲಿಸಬೇಕಾದರೂ ಲಿಖಿತ ರೂಪದಲ್ಲಿ ಸಲ್ಲಿಸಿ. ಅದರ ಒಂದು ಪ್ರತಿ ನನಗೆ ನೀಡಿ. ಮೌಖಿಕವಾಗಿ ಯಾವುದೇ ಬೇಡಿಕೆ ಸಲ್ಲಿಸಬೇಡಿ. ಲಿಖಿತ ಬೇಡಿಕೆ ಸಲ್ಲಿಸಿದರೆ ನಾವು ಫಾಲಪ್ ಮಾಡಲು ಅನುಕೂಲವಾಗುತ್ತದೆ ಎಂದರು.
ಚಿತ್ತಾಪುರ ಹಾಗೂ ವಾಡಿ ಪುರಸಭೆ ಮುಖ್ಯಾಧಿಕಾರಿಗಳು ಮಾಸ್ಕ್ ಹಾಕಿಕೊಳ್ಳದ ವ್ಯಕ್ತಿಗಳಿಗೆ ದಂಡ ಹಾಕುವ ಕೆಲಸ ಪ್ರಾರಂಭಿಸಿ. ಅಂದಾಗ ಮಾತ್ರ ಜನರಿಗೆ ಮಾಸ್ಕ್ ಬಗ್ಗೆ ಅರಿವು ಮೂಡಲು ಸಾಧ್ಯ. ಪೊಲೀಸ್ ಇಲಾಖೆಯವರು ಅವರಿಗೆ ಸಾಥ್ ನೀಡಿ ಮಾಸ್ಕ್ ಹಾಕದವರಿಗೆ ದಂಡ ಹಾಕಿ ಎಂದು ಪುರಸಭೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಇಸ್ಪೀಟ್, ಮಟಕಾ, ಅಕ್ರಮ ಮರಳುಗಾರಿಕೆ ದಂಧೆ ಜೋರಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಐಪಿಎಲ್ ಬುಕ್ಕಿಗಳು ನಡೆಯುತ್ತಿವೆ ಇದು ಕೂಡ ತಡೆಯುತ್ತಿಲ್ಲ. ಇವೆಲ್ಲವುಗಳಿಂದ ನೂರಾರು ಕುಟುಂಬಗಳು ಬೀದಿಗೆ ಬೀಳ್ತಿವೆ. ಚಿತ್ತಾಪುರದಲ್ಲೆ ಒಬ್ಬರು 1 ಕೋಟಿ ಕಳೆದುಕೊಂಡಿದ್ದಾರೆ. ತಮ್ಮಲ್ಲಿ ಮನವಿ ಮಾಡ್ತಿನಿ ಇನ್ನು ಮುಂದಾದರೂ ಇವೆಲ್ಲವೂ ತಡೆಯಿರಿ. ಒಂದು ವೇಳೆ ತಡೆಯುವಲ್ಲಿ ವಿಫಲರಾದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಜೂನ್ವರೆಗೆ ಬಾಕಿಯಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಒಂದೆ ವೇಳೆ ಪೂರ್ಣಗೊಳ್ಳದಿದ್ದರೆ ನಿಮ್ಮ ಪೇನ್ಷನ್ ಹೆಲ್ಡ್ಅಪ್ ಮಾಡಿಸ್ತಿನಿ ಎಂದರು.
ಇದೇ ವೆಳೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ಪ್ರಭಾರಿ ಕೆಎಎಸ್ ಅಧಿಕಾರಿ ಶೃತಿ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಶ್ರೀಧರ್, ಕೃಷ್ಣಪ್ಪ ಕಲ್ಲದೇವರು, ಮಂಜುನಾಥ ರೆಡ್ಡಿ, ವಿಜಯಕುಮಾರ ಬಾವುಗೆ, ಮನೋಜಕುಮಾರ ಗುರಿಕಾರ್ ಸೇರಿದಂತೆ ತಾಲೂಕಿನ ಅಧಿಕಾರಿಗಳು ಇದ್ದರು.
Comments are closed.