Shubhashaya News

‘ಗ್ಯಾರಂಟಿ ಯೋಜನೆಗಳಿಗೆ’ ಮತ್ತೆ ‘SC-ST’ ಗೆ ಮೀಸಲಿಟ್ಟ ಹಣ ಬಳಕೆಗೆ ಮುಂದಾದ ರಾಜ್ಯ ಸರ್ಕಾರ!

ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಳಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಕಳೆದ ವರ್ಷ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ರಾಜ್ಯ ಸರ್ಕಾರ ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಎಸ್​ಸಿಎಸ್​​ಪಿ-ಟಿಎಸ್​​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲು ಮುಂದಾಗಿದೆ.

ಹೌದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ (SC ST) ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಿಂದ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದೆ.

ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಎಸ್​ಸಿಎಸ್​​ಪಿ-ಟಿಎಸ್​​ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಲು ಮುಂದಾಗಿದೆ. ಎಸ್​ಸಿಎಸ್​​ಪಿ-ಟಿಎಸ್​​ಪಿ (ಪರಿಶಿಷ್ಟ ಜಾತಿ ಉಪ ಯಜನೆ ಮತ್ತು ಬುಡಕಟ್ಟು ಉಪಯೋಜನೆ) ಯೋಜನೆಯಡಿ 2025-26ರ ಸಾಲಿನಲ್ಲಿ 42,017.51 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಪೈಕಿ 11,896.84 ಕೋಟಿ ರೂ. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ಬಳಸಲು ಸರ್ಕಾರ ಚಿಂತನೆ ನಡೆಸಿದೆ.

ಎಸ್​ಸಿಎಸ್​​ಪಿ-ಟಿಎಸ್​​ಪಿ ಯೋಜನೆಯಿಂದ ಯುವನಿಧಿ ಯೋಜನೆಗೆ 162 ಕೋಟಿ ರೂಪಾಯಿ, ಗೃಹಲಕ್ಷ್ಮೀ ಯೋಜನೆಗೆ 7,438 ಕೋಟಿ ರೂ., ಗೃಹಜ್ಯೋತಿಗೆ 2,626 ಕೋಟಿ ರೂ., ಶಕ್ತಿ ಯೋಜನೆಗೆ 1,537 ಕೋಟಿ ರೂ. ಹಾಗೂ ಅನ್ನಭಾಗ್ಯಕ್ಕೆ 1,670 ಕೋಟಿ ರೂ. ಬಳಕೆಗೆ ಸರ್ಕಾರ ಮುಂದಾಗಿದೆ.

Comments are closed.

Don`t copy text!