Shubhashaya News

ಜನರ ದಾಹ ತಣಿಸುವ ಅರವಟ್ಟಿಗೆ

ಎಂ.ಡಿ ಮಶಾಖ

ಚಿತ್ತಾಪುರ: ಪಟ್ಟಣದ ಕೋರ್ಟ್ ಹತ್ತಿರ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು.

ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುವ ಜನರಿಗೆ ಅಲ್ಲಲ್ಲಿ ಸ್ಥಾಪಿಸಿದ ಕುಡಿಯುವ ನೀರಿನ ಅರವಟ್ಟಿಗೆ ದಾಹ ತಣಿಸುತ್ತಿದೆ.
ಪಟ್ಟಣದ ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಇತರೆ ಕಾಲೋನಿಗಳಲ್ಲಿ ಕೆಲ ಸಂಘಟನೆಗಳು, ಉದ್ಯಮಿದಾರರು ಹಾಗೂ ಇನ್ನೂ ಕೆಲವರು ವೈಯಕ್ತಿಕವಾಗಿ ಸ್ಥಾಪಿಸಿರುವ ಅರವಟ್ಟಿಗೆಗಳು ಬಿಸಿಲಿಗೆ ಬಸವಳಿದು ಬಂದ ಜನರ ದಾಹ ತಣಿಸುವಲ್ಲಿ ನಿರತವಾಗಿವೆ. ತಂಪಾದ ನೀರು ಕುಡಿದ ಜನ ಅರವಟ್ಟಿಗೆ ಸ್ಥಾಪಿಸಿದವರಿಗೆ ಪುಣ್ಯ ಬರಲಿ ಎಂದು ಹಾರೈಸಿ ಮುಂದೇ ಸಾಗುತ್ತಿದ್ದಾರೆ.
ಬಿಸಿಲಿಗೆ ನೀರು ಕಾಯದಿರಲೆಂದು ಬಹುತೇಕ ಅರವಟ್ಟಿಗೆಗಳ ಮೇಲೆ ಟೆಂಟ್ ಹಾಕಲಾಗಿದೆ. ಗೀಡದ ಕೆಳಗಡೆ ಮಡಿಕೆಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಟ್ಟೆ ಸುತ್ತಿದ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಡಲಾಗುತ್ತಿದೆ. ಇನ್ನೂ ಕೆಲವಡೆ ಪ್ಲಾಸ್ಟಿಕ್ ಕ್ಯಾನ್, ಬ್ಯಾರೆಲ್‍ಗಳಲ್ಲಿ ನೀರು ತುಂಬಿಟ್ಟು ಪಕ್ಕದಲ್ಲಿ ಕ್ಲಾಸ್ ಮತ್ತು ಲೋಟಗಳನ್ನು ಇಡುತ್ತಿದ್ದಾರೆ.


ಪಟ್ಟಣದ ಲಾಡ್ಜೀಂಗ್ ಕ್ರಾಸ್, ಬಸ್ ನಿಲ್ದಾಣದ ಎದರುಗಡೆ, ನಾಗಾವಿ ವೃತ್ತ, ಚಿತ್ತಾವಲಿ ಚೌಕ್, ತಹಶೀಲ್ ಕಚೇರಿ, ರೈಲ್ವೆ ನಿಲ್ದಾಣ, ಭುವನೇಶ್ವರಿ ಚೌಕ್, ಕಲಬುರಗಿ ರಸ್ತೆಯ ಪೆಟ್ರೋಲ್ ಬಂಕ್, ಜನತಾ ಚೌಕ್, ಮಾರ್ಕೆಟ್ ಸೇರಿದಂತೆ ಪಟ್ಟಣದ ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅವರವಟ್ಟಿಗೆಗಳು ತಲೆ ಎತ್ತಿವೆ. ಇದರಿಂದ ನಾನಾ ಕಚೇರಿಗಳಿಗೆ ಕಾರ್ಯ ನಿಮ್ಮಿತ್ತ ಪಟ್ಟಣಕ್ಕೆ ಬರುವ ಸಾರ್ವಜನಿಕರು, ಕೂಲಿಕಾರರು, ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ದಾಹ ತೀರಿಸಿಕೊಳ್ಳುತ್ತಿದ್ದಾರೆ.
ಮಿನರಲ್ ವಾಟರ್ ದುಬಾರಿ: ಪಟ್ಟಣ ಹಾಗೂ ಗ್ರಾಮಗಳಲ್ಲಿ ಮಿನಿರಲ್ ವಾಟರ್ ದಂಧೆ ಜೋರಾಗಿ ನಡೆದಿದ್ದು, ಸಿಕ್ಕಿದ್ದೇ ಸಿರುಂಡೆ ಎಂದು ಅಂಗಡಿಕಾರರು ಮನಬಂದಂತೆ ಗ್ರಾಹಕರ ಜೇಬಿಗೆ ಕೈ ಹಾಕಿದ್ದಾರೆ. ಒಂದು ಲೀಟರ್ ಮಿನಿರಲ್ ವಾಟರ್‍ಗೆ 20ರೂ. ಇದ್ದಿದ್ದನ್ನು 25 ಅಥವಾ 30 ರೂ.ವರೆಗೆ ಮತ್ತು 2 ಲೀಟರ್ ಬಾಟಲಿಗೆ 30 ಇದ್ದಿದ್ದನ್ನು 35-40 ರೂ. ವರೆಗೆ ಹಣ ಪಡೆಯುತ್ತಿದ್ದಾರೆ. ಗ್ರಾಹಕರು ಈ ಕುರಿತು ಪ್ರಶ್ನಿಸಿದರೆ ನೀರು ತಂಪಾಗಲು ಫ್ರೀಡ್ಜ್‍ಗೆ ಹೆಚ್ಚಿನ ಕರೆಂಟ್ ಬೇಕಾಗುತ್ತದೆ. ಹೀಗಾಗಿ ದರ ಹೆಚ್ಚಾಗಿದೆ. ಬೇಕಿದ್ದರೆ ತೋಗೊಳ್ಳಿ ಇಲ್ಲವಾದರೇ ಬೇರೆ ಅಂಗಡಿಗೆ ಹೋಗಿ ತಗೋಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇದರಿಂದಾಗಿ ಗ್ರಾಹಕರು, ಬೈಕ್ ಸಾವಾರರು ಬಿಸಿಲಿ ಜಾಲಕ್ಕೆ ಅಂಜ್ಜಿ ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಎದ್ದು ಕಾಣುತ್ತದೆ.
ಇನ್ನೂ ಕೆಲ ಹೋಟೆಲ್‍ಗಳಲ್ಲಿ ಬರೀ ನೀರು ಕೇಳಿದರೆ ಕೊಡುವ ಮನಸ್ಥಿತಿಯಲ್ಲಿ ಇಲ್ಲ. ಊಟ, ತಿಂಡಿ, ಕಾಫಿಗೆ ಬರುವವರಿಗೆ ಮಾತ್ರ ನೀರು ಕೊಡುತ್ತಾರೆ. ಹೋಟೆಲ್‍ನವರು ಕೂಡ ನೀರು ತರಲು ಹರಸಾಹಸ ಪಡುತ್ತಿದ್ದರಿಂದ ಉಚಿತವಾಗಿ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅರವಟ್ಟಿಗೆಗಳ ನೀರೇ ಬಹುಪಾಲು ಜನರಿಗೆ ಆಸರೆಯಾಗಿದೆ.

ಈ ಬಾರಿ ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ತಾಲೂಕಿನಲ್ಲಿ ಬರಗಾಲದ ಛಾಯೆ ಮೂಡಿದೆ. ಅಂತಹದ್ರಲ್ಲಿ ಹಳ್ಳ-ಕೊಳ್ಳ, ಕೆರೆ-ಬಾವಿ, ಬೋರವೆಲ್‍ಗಳು ಬತ್ತಿವೆ. ನೀರು ಕುಡಿಬೇಕ್ ಅಂದ್ರ ಸಿಗದಂತಹ ಪರಿಸ್ಥಿತಿದಾಗ್ ಚಿತ್ತಾಪುರ ಪಟ್ಟಣದಲ್ಲಿ ಅಲ್ಲಲ್ಲಿ ಗಡಿಗೆಗಳ ಮೂಲಕ ನೀರು ಕುಡಿಸುತ್ತಿರುವವರಿಗೆ ಪುಣ್ಯ ಬರ್ಲೀ ರೀ.
-ಶರಣಮ್ಮ ಸ್ಥಳೀಯ ನಿವಾಸಿ.

ನಮ್ಮ ಭಾಗದಾಗ್ ಕಳೆದ ಬೇಸಿಗೆಕ್ಕಿಂತ ಈ ಭಾರಿ ಬಿಸಿಲು ಜಾಸ್ತಿನೇ ಇದೆ. ಊಟ ಮಾಡಬೇಕ್ ಅಂದ್ರ ಹಸಿವು ಆಗಲ್ಲ ಆದ್ರ ಬರೀ ನೀರಡಕಿ ಆಗತ್ತಾದ್. ರೊಕ್ಕ ಕೊಟ್ಟು ಬಾಟ್ಲಿ ನೀರ್ ಕುಡಿಬೇಕ್ ಅಂದ್ರ 20 ರಿಂದ 30 ರೂ. ಕೊಟ್ಟು ಕುಡಿಯಷ್ಟು ಅಸ್ಥಿ ನಮಗಿಲ್ಲ. ಹೀಗಾಗಿ ಅಲ್ಲಲ್ಲಿ ಗಡಿಗ್ಯಾಗ್ ತುಂಬಿ ಇಟ್ಟಿರುವ ನೀರು ಕುಡಿದು ನೀರಿನ ದಾಹ ತೀರಿಸಿಕೊಳ್ತೀವಿ.
-ಶಾಂತಮ್ಮ ಅಳ್ಳೊಳ್ಳಿ ಗ್ರಾಮದ ನಿವಾಸಿ.

ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ದೊಡ್ಡ ದೊಡ್ಡ ಕಂಪೆನಿಗಳು ಬಿದ್ದಿವೆ. ಇದರಿಂದ ಪಟ್ಟಣಕ್ಕೆ ಸುತ್ತ ಮುತ್ತ ಹಳ್ಳಿಗಳಿಂದ ಬರುವವರ ಸಂಖ್ಯೆ ಗಣನೀಯವಾಗಿದೆ. ಕೆಲವರು ಸರ್ಕಾರಿ ಕೆಲಸಕ್ಕಾಗಲಿ, ಕಂಪೆನಿಗೆ ಹೋಗುವುದಕ್ಕಾಗಲಿ ಅಥವಾ ಗ್ರಾಮದಿಂದ ಪಟ್ಟಣಕ್ಕೆ ಬಂದು ತರಕಾರಿ ತೆಗೆದುಕೊಂಡು ಹೋಗುವಂತಹ ಬಡವರು, ಮಧ್ಯಮ ವರ್ಗಗದವರಿಗೆ 20-30 ರೂ. ಕೊಟ್ಟು ನೀರಿನ ಬಾಟಲಿ ಖರೀದಿಸುವ ಶಕ್ತಿ ಇರಲ್ಲ. ಹೀಗಾಗಿ ಕುಡಿಯುವ ನೀರಿನ ಮಡಿಕೆಗಳ ವ್ಯವಸ್ಥೆ ಮಾಡಲಾಗಿದೆ.
ಇಮ್ತೀಯಾಜ್ ಪಠಾಣ ನೀರಿನ ವ್ಯವಸ್ಥೆ ಕಲ್ಪಿಸಿದ ವ್ಯಕ್ತಿ.

Comments are closed.

Don`t copy text!