Shubhashaya News

ಪೇಠಶಿರೂರ ಗ್ರಾಪಂ ಕಾಳಗಿ ತಾಲೂಕಿಗೆ ಸೇರ್ಪಡೆ ನ್ಯಾಯಸಮ್ಮತ

ಚಿತ್ತಾಪುರ: ಪೇಠಶಿರೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳನ್ನು ಕಾಳಗಿ ತಾಲೂಕಿನಲ್ಲಿ ಸೇರ್ಪಡೆ ಮಾಡಿರುವ ಸರಕಾರದ ಕ್ರಮ ನ್ಯಾಯಸಮ್ಮತವಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಶಿವಯ್ಯ ಗುತ್ತೇದಾರ ತಿಳಿಸಿದ್ದಾರೆ.
ಸುದ್ದಿಗಾರಾರೊಂದಿಗೆ ಮಾತನಾಡಿದ ಅವರು, ಗುಂಡಗುರ್ತಿ ತಾಪಂ ಕ್ಷೇತ್ರದ ಸದಸ್ಯ ಬಸವರಾಜ ಹೊಸ್ಸಳ್ಳಿ ಪೇಠಶಿರೂರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಕಾಳಗಿ ತಾಲೂಕಿಗೆ ಸೇರಿಸಿದ್ದು ತಪ್ಪು ಮರಳಿ ಚಿತ್ತಾಪುರ ತಾಲೂಕಿಗೆ ಸೇರಿಸಬೇಕು ಎಂದು ಹೇಳಿ ವಿನಾಕಾರಣ ಜನರಲ್ಲಿ ಗೊಂದಲ ಮುಡಿಸುತ್ತಿದ್ದಾರೆ ಅವರಿಗೆ ಮಾಹಿತಿ ಕೊರತೆ ಇದೆ ಎಂದು ಹೇಳಿದರು.
ಪೆÉೀಠಶಿರೂರ ಗ್ರಾಮ ಕಾಳಗಿ ತಾಲೂಕಿಗೆ ಸೇರಿಸಬೇಕು ಎಂದು ಬಹಳ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ಅಲ್ಲದೇ ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಡವಳಿಕೆಯಲ್ಲಿ ಪಾಸು ಮಾಡಿದ್ದು ಅಲ್ಲದೇ ಎಂ.ಪಿ.ಪ್ರಕಾಶ ಅವರ ಸಮಿತಿ ನೀಡಿದ ಒಪ್ಪಿಗೆ ಆಧಾರದ ಮೇಲೆ ಈ ಭಾಗದ ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಸೇರ್ಪಡೆಯಾಗಿವೆ ಎಂದರು.
ಪೇಠಶಿರೂರ ಗ್ರಾಮ ಪಂಚಾಯತಿಯಲ್ಲಿ ಬರುವ ಹಳ್ಳಿಗಳಿಗೆ ಕಾಳಗಿ ತಾಲೂಕು ತುಂಬಾ ಅನುಕೂಲಕರವಾಗಿದೆ. ರೈತರ ಸುಮಾರು 425 ಹೆಕ್ಟರ್ ಜಮೀನಿಗೆ ಮತ್ತು ಬೆಣ್ಣೂರ.ಬಿ ಗ್ರಾಮದ ರೈತರ 238 ಹೆಕ್ಟರ್ ಜಮೀನಿಗೆ ಬೆಣ್ಣೆತೋರಾ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಸಿಗಲಿದೆ. ಯೋಜನೆ ಕಚೇರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗಳು ಕಾಳಗಿ ತಾಲೂಕಿನಲ್ಲಿ ಬರುತ್ತವೆ. ಈ ಕಾರಣದಿಂದ ನೀರಾವರಿ ಸೌಲಭ್ಯ ಸರಿಯಾದ ರೀತಿಯಲ್ಲಿ ಲಭ್ಯವಾಗಬೇಕಾದರೆ ನಾವು ಕಾಳಗಿ ತಾಲೂಕಿನಲ್ಲಿ ಇರುವುದು ಸೂಕ್ತವಾಗಿರುತ್ತದೆ. ಶೈಕ್ಷಣಿಕವಾಗಿ ಕೂಡಾ ಕಾಳಗಿ ತಾಲೂಕಿನಲ್ಲಿ ಅನೇಕ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ. ಕಾಳಗಿ ತಾಲೂಕಿನ ಕೋರವಾರ ಅಣವೀರಭದ್ರ ದೇವಸ್ಥಾನದ ಹತ್ತಿರ 110 ಕೆ.ವಿ. ವಿದ್ಯುತ್ ವಿತರಣ ಕೇಂದ್ರ ಸ್ಥಾಪನೆಯಾಗಿರುವುದರಿಂದ ನಮ್ಮ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಲಭ್ಯವಾಗುತ್ತದೆ. ಈ ಎಲ್ಲ ಕಾರಣಗಳಿಂದ ಪೇಠಶಿರೂರ ಗ್ರಾಮ ಕಾಳಗಿ ತಾಲೂಕಿನಲ್ಲಿ ಸೇರಿಸಿರುವುದು ನ್ಯಾಯಸಮ್ಮತವಾಗಿದೆ ಈ ಕುರಿತು ಸರಕಾರದ ಕ್ರಮಕ್ಕೆ ಸ್ವಾಗತ ಮಾಡುತ್ತೇವೆ ಎಂದು ಗ್ರಾಪಂ ಅಧ್ಯಕ್ಷೆ ಪೂಜಾ ರಜಪುತ್, ಉಪಾಧ್ಯಕ್ಷ ರೇವಪ್ಪ ಲಾಳಿ, ಸದಸ್ಯರಾದ ಮಂಜುನಾಥ ಪೂಜಾರಿ, ಸಂತೋಷ ಕದ್ದರಗಿ, ಜಗದೇವಿ ಸಂಗೋಳಗಿ, ಕಾಶಿನಾಥ ಕುಲಕರ್ಣಿ, ರೇಣುಕಾ ಪೂಜಾರಿ, ಸುನೀತಾ ಚವ್ಹಾಣ, ನಾಗಪ್ಪ ಸಿರಗಾನೂರ, ಶೋಭಾ ತಳವಾರ ತಿಳಿಸಿದ್ದಾರೆ.

Comments are closed.

Don`t copy text!