Shubhashaya News

ಶಿಕ್ಷಕರು ಸಾವಿತ್ರಿಯಂತಾಗಲು ಸಂಕಲ್ಪ ತೊಡಿ: ಪುಟ್ಟಮಣಿ

ಚಿತ್ತಾಪುರ: ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಪುಟ್ಟಮಣಿ ದೇವಿದಾಸ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಮಹಿಳೆಯರಿಗೆ ಶಿಕ್ಷಣ ಕೊಡಿಸಲೇಬೇಕು ಎಂಬ ಛಲದಿಂದ ಅವಮಾನಗಳಿಗೆ ಎದೆಯೊಡ್ಡಿ ಸಂಘರ್ಷದ ಬದುಕು ಸೆವೆಸಿದ ಸಾವಿತ್ರಿಬಾಯಿ ಫುಲೆಯಂತಾಗಲು ಶಿಕ್ಷಕಿಯರೆಲ್ಲರೂ ಸಂಕಲ್ಪ ತೊಡಬೇಕು ಎಂದು ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಪುಟ್ಟಮಣಿ ದೇವಿದಾಸ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಸಮಿತಿಯ ಉದ್ಘಾಟನೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓದಲು ಮತ್ತು ಬರೆಯಲು ಬರುತ್ತದೆ ಎಂಬ ಕಾರಣಕ್ಕೆ ಅವರು ಶಿಕ್ಷಿತರಾಗಲ್ಲ. ಅಂತಹವರನ್ನು ಅಕ್ಷರಸ್ಥರು ಎಂದು ಕರೆಯಬಹುದಷ್ಟೇ. ಸಮಾಜದ ಪ್ರಗತಿಗಾಗಿ ಸರಿಯಾದ ನಿರ್ಧಾರ ತೆಗೆದುಕೊಂಡು ಸರಿ ಮಾರ್ಗದ ಹೋರಾಟ ನಡೆಸುವ ಪ್ರಜ್ಞಾವಂತರು ನಿಜವಾದ ಶಿಕ್ಷಿತರಾಗುತ್ತಾರೆ. ಅಂತಹ ಪ್ರಜ್ಞಾವಂತ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಮಹಿಳೆಯರಿಗೆ ಅಕ್ಷರಗಳನ್ನು ಕಲಿಸಿ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ. ಶಿಕ್ಷಕರೇಲ್ಲರೂ ಕ್ಲಾರಾ ಜಟ್ಕೀನ್, ಸಾವಿತ್ರಿ ಫುಲೆ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಚಿಂತನೆಗಳನ್ನು ಆದರ್ಶವಾಗಿ ಸ್ವೀಕರಿಸಿ ಸಮಾಜ ಪರಿವರ್ತನೆಗೆ ಶ್ರಮಿಸಬೇಕು. ಅಂಬೇಡ್ಕರರು ಸಂವಿಧಾನದಲ್ಲಿ ನೀಡಿರುವ ಮಹಿಳಾ ಹಕ್ಕುಗಳನ್ನು ದುರುಪಯೋಗ ಮಾಡಿಕೊಳ್ಳದೆ ಸದ್ಭಳಕೆ ಮಾಡಿಕೊಳ್ಳಬೇಕು. ಇಂದಿನ ಅನೇಕ ಶಿಕ್ಷಕರಿಗೆ ಇನ್ನೂ ಒತ್ತಕ್ಷರಗಳೇ ತಿಳಿದಿಲ್ಲ. ಕಾಗುಣಿತ ಕಲಿತುಕೊಳ್ಳದ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ ಮಾತನಾಡಿ, ಸ್ತ್ರೀ ಶೋಷಣೆ ಎಂಬುದು ಕೇವಲ ಭಾರತಕ್ಕೆ ಸೀಮಿತವಲ್ಲ. ಇದು ಪ್ರಪಂಚದಾದ್ಯಂತ ಕಂಡು ಬರುತ್ತಿದೆ. ಬುದ್ಧ, ಬಸವ, ಸಾವಿತ್ರಿ ಫುಲೆ, ಅಂಬೇಡ್ಕರ್ ಅವರು ಮಹಿಳೆಯರ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನಗಳಾಗಿದ್ದಾರೆ. ದುರಾದೃಷ್ಠವೆಂದರೆ ಹೆಸರು ಹೇಳುವ ನಾವುಗಳು ತತ್ವಾದರ್ಶಗಳನ್ನು ಪಾಲಿಸುವಲ್ಲಿ ಎಡವಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ಶಿಕ್ಷಣ ಕ್ಷೇತ್ರದಲ್ಲೇಕೆ ಮಹಿಳೆಯರು ಹಿಂದೆ ಬಿದ್ದಿದ್ದಾರೋ ಅರ್ಥವಾಗುತ್ತಿಲ್ಲ. ಅಕ್ಷರಸ್ಥ ಅನಾಗರಿಕರಾಗದೆ ಶಾಲೆಗಳಲ್ಲಿ ಸಾಮರಸ್ಯ, ಸಹನಶೀಲತೆ, ದುಡಿಮೆ, ಮೌಲ್ಯಗಳನ್ನು ಉಳಿಸಲು ಶಿಕ್ಷಕರು ಮುಂದಾಗಬೇಕು ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಕಾರ್ಯಕ್ರಮ ಉದ್ಘಾಟಿಸಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕೀಯರ ಸಂಘದ ತಾಲೂಕು ಅಧ್ಯಕ್ಷೆ ನಾಗುಬಾಯಿ ಮಲಘಾಣ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕೊರೊನಾ ವಾರಿಯರ್ಸ್‍ಗಳನ್ನು ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ರೇವಣಸಿದ್ದಪ್ಪ ರೋಣದ್, ಮಹೇಬೂಬ ಅಮೀನ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಬಿ.ನಾಯ್ಕೋಡಿ, ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ, ಮಾಯಾದೇವಿ ರೋಣದ್, ಗೌತಮಿ ಎಂ.ಹಿರೋಳಿ, ಸತೀಶಕುಮಾರ ಕೋಬಾಳಕರ, ಸಂತೋಷ ಸಲಗರ ಶಹಾಬಾದ, ಸುಮಂಗಲಾ ಚಿಂಚೋಳಿ, ಲಲಿತಾ ಜ್ಯೋಷಾಯಿ ಸೇರಿದಂತೆ ವಿವಿಧ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕಿಯರು ಇದ್ದರು.
ಶಿಕ್ಷಕಿ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶ್ರೀದೇವಿ ನಿರೂಪಿಸಿದರು. ಸವಿತಾ ವಂದಿಸಿದರು.

Comments are closed.

Don`t copy text!