ಆಳಂದ: ಪಟ್ಟಣದಲ್ಲಿ ಪೊಲಿಯೊ ಲಸಿಕೆ ಅಭಿಯಾನವು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ ಮಕ್ಕಳಿಗೆ ಲಸಿಕೆ ಹಾಕಿದರು.
ಆಳಂದ್: ಮಕ್ಕಳನ್ನು ಜೀವಮಾನದ ಅಂಗವೈಕಲ್ಯದಿAದ ರಕ್ಷಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೊ ಲಸಿಕಾ ಅಭಿಯಾನವನ್ನು ಆಳಂದ ಪಟ್ಟಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಅಭಿಯಾನಕ್ಕಾಗಿ ೨೮ ವಿಶೇಷ ತಂಡಗಳನ್ನು ರಚಿಸಿ, ಪಟ್ಟಣದ ವಿವಿಧ ವಾರ್ಡ್ಗಳು, ಬಸ್ ನಿಲ್ದಾಣ ಪ್ರದೇಶ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದರ್ಗಾ ಪ್ರದೇಶ ಸೇರಿದಂತೆ ಜನಸಂದಣಿ ಇರುವ ಸ್ಥಳಗಳಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪೊಲಿಯೊ ಲಸಿಕೆ ಹನಿಗಳನ್ನು ಹಾಕಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉಮಕಾಂತ್ ರಾಜಗಿರಿ ಅವರು ಮಕ್ಕಳಿಗೆ ಪೊಲಿಯೊ ಹನಿಗಳನ್ನು ಹಾಕುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ ಅವರು ಮಕ್ಕಳಿಗೆ ಪೊಲಿಯೊ ಹನಿಗಳನ್ನು ಹಾಕಿ, ಪೋಷಕರಿಗೆ ಲಸಿಕೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಅಲ್ಲದೆ, ಪೊಲಿಯೊ ಸಂಪೂರ್ಣ ನಿರ್ಮೂಲನೆಗಾಗಿ ಪ್ರತಿಯೊಂದು ಮಗುವಿಗೂ ನಿಗದಿತ ದಿನದಂದು ಕಡ್ಡಾಯವಾಗಿ ಪೊಲಿಯೊ ಹನಿಗಳನ್ನು ಹಾಕಿಸುವುದು ಅತ್ಯಂತ ಅಗತ್ಯವಾಗಿದೆ. ಮಗು ಈ ಹಿಂದೆ ಲಸಿಕೆ ಪಡೆದಿದ್ದರೂ ಸಹ ಪ್ರತಿಯೊಂದು ಪಲ್ಸ್ ಪೊಲಿಯೊ ಅಭಿಯಾನದಲ್ಲಿ ಮತ್ತೆ ಹನಿಗಳನ್ನು ಹಾಕಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ತಿಳಿಸಿದರು.
ಅಭಿಯಾನದ ಯಶಸ್ಸಿಗೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರು ಸಮನ್ವಯದಿಂದ ಕಾರ್ಯನಿರ್ವಹಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಲಸಿಕಾ ಕೇಂದ್ರಗಳನ್ನು ತೆರೆಯುವ ಮೂಲಕ ಪ್ರಯಾಣಿಕರು ಹಾಗೂ ವಿವಿಧ ಕಾರಣಗಳಿಂದ ಮನೆಗಳಲ್ಲಿ ಲಭ್ಯವಿರದ ಮಕ್ಕಳಿಗೂ ಲಸಿಕೆ ನೀಡಲಾಯಿತು.
ಆರೋಗ್ಯ ಇಲಾಖೆ ಎಲ್ಲ ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೊಲಿಯೊ ಹನಿಗಳನ್ನು ಹಾಕಿಸಿ, “ಪೊಲಿಯೊ ಮುಕ್ತ ಭಾರತ” ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.