Shubhashaya News

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ:

95 ಕೋಟಿ ಅನುದಾನದಲ್ಲಿ 45 ಕೋಟಿ ಶಿಕ್ಷಣಕ್ಕೆ ಮೀಸಲು - ಉಪಾಧ್ಯಕ್ಷ ಸಂಜಯ ಜಾಗಿರದಾರ್

(ಕರ್ನಾಟಕ ವಾರ್ತೆ) ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯವಿದ್ದು, ಸರ್ಕಾರದಿಂದ ಬಿಡುಗಡೆಯಾಗಿರುವ 95 ಕೋಟಿ ಅನುದಾನದಲ್ಲಿ 45 ಕೋಟಿ ಶಿಕ್ಷಣಕ್ಕೆ ಮೀಸಲಿಡಲಾಗಿದೆ ಎಂದು ಬೆಂಗಳೂರು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ ಜಾಗಿರದಾರ್ ಹೇಳಿದರು.

ನಗರದ ಐವಾನ್-ಎ-ಶಾಹಿ ಹೊಸ ಅಥಿತಿ ಗೃಹ ಸಭಾಂಗಣದಲ್ಲಿ ಶುಕ್ರವಾರ ನಡೆದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ರಿಶ್ಚಿಯನ್ ಸಮುದಾಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತಂದಿರುವ ವಿವಿಧ ಕ್ಷೇಮಾಭಿವೃದ್ಧಿ ಯೋಜನೆಗಳು ಮತ್ತು ಅನುದಾನಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಬೇಕು ಎಂದು ತಿಳಿಸಿದರು.

ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಐ.ಎ.ಎಸ್, ಐ.ಪಿ.ಎಸ್ ಹಾಗೂ ಕೆ.ಎ.ಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಆರು ತಿಂಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು. ಉಳಿದ 50 ಕೋಟಿ ಅನುದಾನವನ್ನು ಸಮುದಾಯ ಭವನ, ಚರ್ಚ್ಗಳ ನವೀಕರಣ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದು ಎಂದು ಸಮಾಜದ ಮುಖಂಡರುಗಳಿಗೆ ತಿಳಿಸಿದರು.

ವಿದೇಶದಲ್ಲಿ ವ್ಯಾಸಂಗ ಮಾಡುವ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಧನಸಹಾಯವನ್ನು 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಯರ ಸ್ವಯಂ ಉದ್ಯೋಗಕ್ಕೆ 2 ಲಕ್ಷ ಅನುದಾನ ಸಿಗಲಿದ್ದು, ಸ್ವಯಂ ಉದ್ಯೋಗಕ್ಕಾಗಿ ‘ಆಹಾರ ವಾಹನ’ ಖರೀದಿಸಲು 2 ರಿಂದ 8 ಲಕ್ಷದವರೆಗೆ ನೆರವು ನೀಡಲಾಗುತ್ತಿದೆ. ಸ್ವಂತ ಜಾಗ ಹೊಂದಿರುವವರಿಗೆ ಮನೆ ನಿರ್ಮಾಣಕ್ಕೆ 2.70 ಲಕ್ಷದಿಂದ 3. ಲಕ್ಷದವರೆಗೆ ನೆರವು ಸಿಗಲಿದೆ ಎಂದರು.

ಚರ್ಚ್ ನವೀಕರಣಕ್ಕೆ ಡಿಜಿಟಲ್ ಖಾತೆ ಕೊರತೆಯಿದ್ದರೆ, ನಿಗದಿಪಡಿಸಿದ 5 ಪ್ರಮಾಣಪತ್ರಗಳಲ್ಲಿ ಒಂದನ್ನು ನೀಡಬಹುದು. ಅರ್ಜಿದಾರರು ಕೇವಲ ಅರ್ಜಿ ಹಾಕಿ ಸುಮ್ಮನಾಗದೆ ಕಚೇರಿಯಿಂದ ಸ್ವೀಕೃತಿ ಪತ್ರ ಪಡೆದು, ಅರ್ಜಿಯ ಸ್ಥಿತಿಗತಿ ತಿಳಿದುಕೊಳ್ಳಬೇಕು. ಮಾಹಿತಿ ಅಭಾವ ನೀಗಿಸಲು ಮುಂದಿನ ಭಾನುವಾರದಿಂದ ಚರ್ಚ್ಗಳಲ್ಲಿ ಪ್ರಾರ್ಥನೆಯ ನಂತರ ಕರಪತ್ರ ಹಂಚಿ ಜಾಗೃತಿ ಮೂಡಿಸಲು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ವೇದಿಕೆ ಮೇಲೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಸಂಗಮೇಶ್ವರ, ಜಿಲ್ಲಾ ವ್ಯವಸ್ಥಾಪಕರ ಅಲ್ಪಸಂಖ್ಯಾರ ಅಭಿವೃದ್ಧಿ ನಿಗಮದ ಅಧಿಕಾರಿ ಹಜರತ್ ಅಲ್ಲಿ, ಕಲಬುರಗಿ ಧರ್ಮಕ್ಷೇತ್ರದ ಚಾನ್ಸೆಲರ್ ಫಾದರ್ ಸ್ಟಾನಿ ಲೋಬೋ ಅಖಿಲ ಭಾರತ ಕ್ರೈಸ್ತ ಮಹಾಸಭಾದ ಉಪದ್ಯಾಕ್ಷರಾದ ಸಂಧ್ಯಾರಾಜ ಸಾಮವೇಲ್, ಸಿಮಿಯೋನ್ ಶಿರೋಮಣಿ, ಕಲ್ಬುರ್ಗಿ ಜಿಲ್ಲೆಯ ಕ್ರೈಸ್ತ ಚರ್ಚಿನ್ ಮುಖ್ಯಗುರುಗಳು ಪಾದ್ರಿಗಳು ಸೇರಿದಂತೆ ಅನೇಕ ಚರ್ಚಿನ ಸದಸ್ಯರುಗಳು ಭಾಗವಹಿಸಿದ್ದರು.

Leave A Reply

Your email address will not be published.