ಬಿಗ್ಬಾಸ್ ಸೀಸನ್ 8 ಅದ್ಭುತವಾಗಿ ಮೂಡಿ ಬರುತ್ತಿದೆ. ನಟ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ಎಲ್ಲರ ಮನ ಗೆಲ್ಲುವಂತೆ ನಡೆಸಿಕೊಡುತ್ತಿದ್ದಾರೆ. ಆದರೆ ಕಳೆದ ಎರಡು ವಾರಗಳಿಂದ ಕಿಚ್ಚ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿಲ್ಲ. ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಬಿಗ್ಬಾಸ್ಗೆ ಬರಲಾಗುತ್ತಿಲ್ಲ ಎಂದು ಅವರು ತಿಳಿಸಿದ್ದರು. ಈ ವಾರ ಬಂದೇ ಬರುತ್ತೇನೆ ಎಂದು ಕೂಡ ತಿಳಿಸಿದ್ದರು. ಆದರೆ ಅಷ್ಟರಲ್ಲಾಗಲೇ ಬಿಗ್ಬಾಸ್ ಮೇಲೂ ಕರೊನಾ ಕರಿ ನೆರಳು ತಾಕಿದೆ.
ಹೌದು ಕರೊನಾ ನಿಯಂತ್ರಣ ಮಾಡುವ ಸಲುವಾಗಿ, ರಾಜ್ಯಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದೆ. ಸಿನಿಮಾ, ಕಿರುತೆರೆ ಶೂಟಿಂಗ್ಗೂ ಬ್ರೇಕ್ ಹಾಕಲಾಗಿದೆ. ಅದೇ ಕಾರಣಕ್ಕೆ ಈ ವಾರ ಕಿಚ್ಚ ವೇದಿಕೆ ಮೇಲೆ ನಿಂತು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗುವುದಿಲ್ಲ. ಕಳೆದ ಎರಡು ವಾರಗಳಂತೆ ಈ ವಾರವೂ ನಾಮಿನೇಷನ್ ಆಗಿರುವ ಸ್ಪರ್ಧಿಗಳನ್ನು ವಿವಿಧ ಚಟುವಟಿಕೆಗಳ ಮೂಲಕವೇ ಎಲಿಮಿನೇಟ್ ಮಾಡಲಾಗುವುದು ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಾಹಿನಿ, ‘ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ, ಕಿಚ್ಚ ಸುದೀಪ್ ಅವರ ಜತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ.’ ಎಂದು ತಿಳಿಸಿದೆ. ಇದು ಕಿಚ್ಚನ ಅಭಿಮಾನಿಗಳಲ್ಲಿ ನಿರಾಸೆ ತಂದಿದೆ.
ಕೃಪೆ: (ಏಜೆನ್ಸೀಸ್)