Shubhashaya News

ನೂತನ ‘CLP’ ನಾಯಕ ಡಿಕೆ ಶಿವಕುಮಾರ್ : ಸಿದ್ದರಾಮಯ್ಯ ಘೋಷಣೆ

ರಾಜಧಾನಿಯ ವಿಧಾನಸೌಧದಲ್ಲಿ ಇಂದು ನಡೆದ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಭಾರಿ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ರಾಜ್ಯದ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಪ್ರಸ್ತಾವನೆಯನ್ನು ಸಭೆಯ ಮುಂದೆ ಮಂಡಿಸಿರುವುದು ವಿಶೇಷವಾಗಿತ್ತು.

ಸಿದ್ದರಾಮಯ್ಯ ಪ್ರಸ್ತಾವನೆ – ಹೈಕಮಾಂಡ್ ಅನುಮೋದನೆ: ವಿಧಾನಸೌಧದ ಸಭಾಂಗಣದಲ್ಲಿ ಜಮಾಯಿಸಿದ್ದ ಪಕ್ಷದ ಎಲ್ಲಾ ನೂತನ ಶಾಸಕರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಸಿಎಂ ಅವರ ಈ ಪ್ರಸ್ತಾವನೆಗೆ ಸಭೆಯಲ್ಲಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಉಸ್ತುವಾರಿಗಳು ಹಾಗೂ ವೀಕ್ಷಕರಾದ ಜಯರಾಮ್ ರಮೇಶ್ ಮತ್ತು ಕೆ.ಸಿ. ವೇಣುಗೋಪಾಲ್ ಅವರು ತಕ್ಷಣವೇ ಹಸಿರು ನಿಶಾನೆ ತೋರಿ, ಅಧಿಕೃತ ಅನುಮೋದನೆ ನೀಡಿದರು.

ಹಿರಿಯ ಹಾಗೂ ಯುವ ನಾಯಕರ ದಂಡು: ಈ ಅತ್ಯಂತ ಪ್ರಮುಖ ರಾಜಕೀಯ ಸಭೆಯಲ್ಲಿ ಸರ್ಕಾರದ ಹಿರಿಯ ಸಚಿವರು ಹಾಗೂ ಪ್ರಭಾವಿ ನಾಯಕರು ಭಾಗವಹಿಸಿದ್ದರು. ಸಚಿವರಾದ ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಆರ್.ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಶಿವರಾಜ್ ತಂಗಡಗಿ ಮತ್ತು ಈಶ್ವರ್ ಖಂಡ್ರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಪ್ರಕ್ರಿಯೆಗೆ ಸಾಕ್ಷಿಯಾದರು.

ಒಗ್ಗಟ್ಟು ಪ್ರದರ್ಶಿಸಿದ ಶಾಸಕರು: ಇವರೊಂದಿಗೆ ಪಕ್ಷದ ಮುಖಂಡರಾದ ಟಿ.ಬಿ. ಜಯಚಂದ್ರ, ಸಿ.ಪಿ. ಯೋಗೇಶ್ವರ್, ಲಕ್ಷ್ಮಣ ಸವದಿ, ತನ್ವೀರ್ ಸೇಠ್, ಎನ್.ಎ. ಹ್ಯಾರಿಸ್, ಪ್ರದೀಪ್ ಈಶ್ವರ್, ನಯನಾ ಮೋಟಮ್ಮ, ರೂಪಾ ಶಶಿಧರ್, ರಿಜ್ವಾನ್ ಅರ್ಷದ್, ಶಿವಲಿಂಗೇಗೌಡ, ಕದಲೂರು ಉದಯ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಬಹುತೇಕ ಎಲ್ಲಾ ಶಾಸಕರು ಸಭೆಯಲ್ಲಿ ಪಾಲ್ಗೊಂಡು ನೂತನ ನಾಯಕನ ಆಯ್ಕೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.

Leave A Reply

Your email address will not be published.