Shubhashaya News

BIG NEWS : ಏ.24ಕ್ಕೆ `ಕರ್ನಾಟಕ SSLC ಪರೀಕ್ಷೆ ಫಲಿತಾಂಶ’ ಪ್ರಕಟ ಡೌಟ್.!

ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟಣೆಯು ಈಗ ಕಾನೂನು ಸಂಘರ್ಷದ ಸುಳಿಗೆ ಸಿಲುಕಿದೆ. ಈ ಮೊದಲು ಏಪ್ರಿಲ್ 24ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇತ್ತಾದರೂ, ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಆ ದಿನಾಂಕದಂದು ಫಲಿತಾಂಶ ಹೊರಬರುವುದು ಅನುಮಾನ ಎಂದು ಹೇಳಲಾಗುತ್ತಿದೆ.

ತೃತೀಯ ಭಾಷಾ ವಿಷಯಗಳಿಗೆ (ಹಿಂದಿ ಸೇರಿದಂತೆ) ಈ ಹಿಂದೆ ಸರ್ಕಾರವು ಗ್ರೇಡಿಂಗ್‌ ನೀಡಲು ನಿರ್ಧರಿಸಿತ್ತು. ಆದರೆ, ಗ್ರೇಡಿಂಗ್ ಬದಲಿಗೆ ಹಳೆಯ ಪದ್ಧತಿಯಂತೆ ಅಂಕಗಳನ್ನೇ ನೀಡಬೇಕು ಎಂದು ಹೈಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಈಗ ಹೈಕೋರ್ಟ್ ಮೆಟ್ಟಿಲೇರಿದ್ದು, ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ.

ಸರ್ಕಾರದ ಈ ಮೇಲ್ಮನವಿಯ ವಿಚಾರಣೆಯು ಏಪ್ರಿಲ್ 21ರಂದು ನಡೆಯಲಿದೆ. ತೃತೀಯ ಭಾಷೆಯಲ್ಲಿ ಗ್ರೇಡ್ ನೀಡಬೇಕೋ ಅಥವಾ ಅಂಕಗಳನ್ನು ಪರಿಗಣಿಸಬೇಕೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಅಂತಿಮ ಫಲಿತಾಂಶದ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ.

ಜನಗಣತಿ ಕಾರ್ಯದ ಹಿನ್ನೆಲೆಯಲ್ಲಿ ಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ಇದ್ದು, ಅಂಕ ಮತ್ತು ಗ್ರೇಡ್ ಎರಡೂ ಮಾದರಿಯಲ್ಲಿ ಫಲಿತಾಂಶ ಸಿದ್ಧಪಡಿಸುವುದು ಮಂಡಳಿಗೆ ಸವಾಲಾಗಿದೆ.

ನಾಳೆ (ಏ. 21) ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಫಲಿತಾಂಶದ ದಿನಾಂಕ ನಿರ್ಧಾರವಾಗಲಿದೆ. ಒಂದು ವೇಳೆ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದರೆ ಅಥವಾ ಸುದೀರ್ಘ ಚರ್ಚೆ ನಡೆದರೆ, ಏಪ್ರಿಲ್ 24ರಂದು ಫಲಿತಾಂಶ ಬರುವುದು ಬಹುತೇಕ ಅಸಾಧ್ಯ.

Comments are closed.

Don`t copy text!